Wednesday, December 16, 2015

Good Evening, Kannada & Kannadigaru

Good Evening, 16th December 2015
@ Hiremath, Tumkur

ರಾಜಧಾನಿ ಬೆಂಗಳೂರಲ್ಲಿ ವ್ಯವಸ್ಥಿತವಾಗಿ
ಕನ್ನಡದ ಮತ್ತು ಕನ್ನಡ ಭಾಷೆಯ 
ಮುಳುಗಡೆ ಆಗುತ್ತಿದೆ...!!  
                                      ಡಾ. ಶಿವಾನಂದ ಶಿವಾಚಾರ್ಯರು, ಹಿರೇಮಠ, ತುಮಕೂರು

            ಬೆಂಗಳೂರು ಮಹಾನಗರದಲ್ಲಿರುವ ಬಹುತೇಕ ಮತ್ತು ಬಹುತರ ಜನ
ಕನ್ನಡಿಗರು  ಇತ್ತೀಚೆಗೆ ಕನ್ನಡ ಮಾತನಾಡುವುದನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದಾರೆ.
ಬೆಂಗಳೂರಿನ ಮಹಾಕನ್ನಡಿಗರು ಹಿಂದೀ ಮತ್ತು ಆಂಗ್ಲಭಾಷೆಯ ಅಡಿಯಾಳಲ್ಲ,
ನುಡಿಯಾಳಾಗಿ ಬಿಟ್ಟಿದ್ದಾರೆ. ಕನ್ನಡಭಾಷೆಗೆ ರಾಜಧಾನಿಯಲ್ಲಿಯೇ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಅದು ಪ್ರಾಣಭಯದಿಂದ ತತ್ತರಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ‘ಪರಭಾಷಾ’ ರಾಜಧಾನಿಯಾಗಿ
ಮತ್ತು ಪರಭಾಷಾ ಪ್ರಾಬಲ್ಯದ ಶಕ್ತಿಕೇಂದ್ರವಾಗಿ ರೂಪುಗೊಳ್ಳತೊಡಗಿದೆ.
          ಬೆಂಗಳೂರಿಗರಿಂದ ಬೆಂಗಳೂರಲ್ಲಿ ಕನ್ನಡವನ್ನು ‘ಕಟ್ಟುವ’ ಕೆಲಸ ನಡೆಯುತ್ತಿಲ್ಲ.
ಬೆಂಗಳೂರಲ್ಲಿಯೇ ಕನ್ನಡಭಾಷೆ ಮುಳುಗಡೆಗೆ ಮತ್ತು ಭಾಷಾ-ಒತ್ತುವರಿಗೆ
 ವೇದಿಕೆ ಹಾಗೂ ವಸ್ತುವಾಗಿಬಿಟ್ಟಿದೆ
. ಇನ್ನು ಮೇಲಾದರೂ ಸರಿ, ಬೆಂಗಳೂರಿನ ಕನ್ನಡಿಗರು
ಎಚ್ಚತ್ತುಕೊಳ್ಳದೆ  ಹೋದರೆ ಬೆಂಗಳೂರಲ್ಲಿ ಕನ್ನಡದ ಸಮಾಧಿಯಾಗುತ್ತದೆ
 ಮತ್ತು ಕನ್ನಡಿಗರ ಉಸಿರುಕಟ್ಟುತ್ತದೆ.

ನಾವು ನಮ್ಮ ನೆರೆಹೊರೆಯವರ ಹಾಗೆ 
ಭಾಷಾಂಧರಾಗಿ ಗುರುತಿಸಿಕೊಳ್ಳುವುದು ಬೇಡ. ಭಾಷಾಂಧತೆ ಏನೋ ಬೇಡ ಸರಿ,
 ಆದರೆ ಭಾಷಾಭಿಮಾನವೂ ಬೇಡವೆಂದರೆ ಹೇಗೆ? 
ನಾವುಗಳು ಇನ್ನೊಬ್ಬರ ಅಡಿಯಾಳಾಗುವುದು ಬೇಡ. 
ಆದರೆ ನಾವು ನುಡಿಯಾಳಾಗಿ 
ನಾಡು-ನುಡಿಗಳನ್ನು ಶ್ರೀಮಂತಿಸಿಕೊಂಡಿರುವುದು 
ಮತ್ತು ಸಮೃದ್ಧಗೊಳಿಸಿಕೊಂಡಿರುವುದು ತಪ್ಪಲ್ಲವಲ್ಲ!!
ನಮ್ಮ ಅಭಿಪ್ರಾಯದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು
 ಕನ್ನಡನಾಡಲ್ಲಿರುವ ಸನಿವಾಸಿ ಕನ್ನಡಿಗರಿಗಿಂತ ಹೊರನಾಡುಗಳಲ್ಲಿರುವ 
ಹೊರನಾಡು ಮತ್ತು ಅನಿವಾಸಿ ಕನ್ನಡಿಗರೇ ತುಂಬ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. 
ಹೊರರಾಜ್ಯ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರಿಗೆ 
ಕನ್ನಡ ಸಾಹಿತ್ಯ ಮತ್ತು ಸಾರಸ್ವತಗಳ ಬಗ್ಗೆ ಇರುವಷ್ಟು 
ಕಾಳಜಿ, ಪ್ರೀತಿ, ಪ್ರೇಮ ಕನ್ನಡನಾಡಿನಲ್ಲಿರುವ 
ನಮ್ಮ-ನಿಮ್ಮಗಳಲ್ಲಿ ಖಂಡಿತವಾಗಿಯೂ ಇಲ್ಲ. 
ಇದನ್ನು ನಾವು ಪ್ರಮಾಣವಾಗಿಹೇಳುತ್ತೇವೆ.
ಹೊರನಾಡುಗಳಲ್ಲಿರುವ ಕನ್ನಡಿಗರು ‘ಕನ್ನಡವನ್ನು ಕಟ್ಟುವ’ 
ಮತ್ತು ‘ಕನ್ನಡೇತರರನ್ನು ಮುಟ್ಟುವ’ ಕೆಲಸವನ್ನು ತುಂಬ ಚೆನ್ನಾಗಿ ಮಾಡುತ್ತಿದ್ದಾರೆ. 
ಇಲ್ಲಿರುವ ನಾವು ಮಾತ್ರ “ಹಿತ್ತಲಗಿಡ ಮದ್ದಲ್ಲ” ಎಂಬ ಹಾಗೆ ವರ್ತಿಸಿಕೊಂಡಿದ್ದೇವೆ. 
ಅವರು ಮಾತ್ರ “ಹಿತ್ತಲಗಿಡವೇ ಮದ್ದು”, “ಹಿತ್ತಲಗಿಡದಂಥ ಮದ್ದು ಇನ್ನೊಂದಿಲ್ಲ” ಎಂಬಂತೆ
 ನಾಡು-ನುಡಿಗಳ ಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 
ಕನ್ನಡವನ್ನು ಕಟ್ಟುವ ಕೆಲಸವನ್ನು ಅಮೇರಿಕಾ ಕನ್ನಡಿಗರು, 
ಆಸ್ಟ್ರೇಲಿಯನ್ ಕನ್ನಡಿಗರು, ನ್ಯೂಜಿಲೆಂಡ್ ಕನ್ನಡಿಗರು, 
ದುಬೈ-ಸಿಂಗಪುರ್‌ಗಳಲ್ಲಿರುವ ಕನ್ನಡಿಗರು ಮನಮುಟ್ಟಿ ಮಾಡುತ್ತಿದ್ದಾರೆ.
ಅವರುಗಳಲ್ಲಿ ಕನ್ನಡದ ಕುರಿತಾಗಿರುವ ಎಳೆತ-ಸೆಳೆತ, ತುಡಿತ-ಮಿಡಿತಗಳನ್ನು ಕಂಡು 
ನಾವು ಬೆರಗಾಗಿದ್ದೇವೆ. 
ಅವರಲ್ಲಿರುವ ಅಪರೂಪದ  ಕನ್ನಡಾಭಿಮಾನವನ್ನು ಪ್ರೋತ್ಸಾಹಿಸಲೆಂದೇ 
ನಮ್ಮ ಕರ್ನಾಟಕ ಘನ ಸರಕಾರವು ಪ್ರತಿವರುಷ ಹೊರನಾಡುಗಳಲ್ಲಿದ್ದೂ 
ಕನ್ನಡವನ್ನು ಕಟ್ಟುವ ಕೆಲಸ ಮಾಡುವವರಿಗೆ ರಾಜ್ಯಮಟ್ಟದ 
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತದೆ.
ನಮ್ಮ ರಾಷ್ಟ್ರಕವಿಗಳು ಹೇಳಿದ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” 
ಎಂಬ ಮಾತನ್ನು ಅವರು ಅಕ್ಷರಶಃ ಆತ್ಮಸಾತ್- ಗೊಳಿಸಿಕೊಂಡಿದ್ದಾರೆ. 
ಸದ್ಯಕ್ಕೆ ಇಲ್ಲಿರುವ ನಾವು ಜನಗಳು “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂದು
 ಹೇಳದಿದ್ದರೂ ಪರವಾ ಇಲ್ಲ, “ಕನ್ನಡವೂ ಸತ್ಯ”, “ಕನ್ನಡವೂ ನಿತ್ಯ” ಎಂದು 
ತಿಳಿದುಕೊಂಡಿದ್ದರೆ ಸಾಕು ಎನ್ನುವಂತಾಗಿದೆ. ನಮಗೇನೋ ಕನ್ನಡ 
ಇಲ್ಲಿಗಿಂತಲೂ ಹೊರಗೇನೇ ಹೆಚ್ಚು ಜೀವಂತವಾಗಿದೆ ಎಂದೆನಿಸುತ್ತದೆ.
ಈ ಸಂದರ್ಭದಲ್ಲಿ ನಾವು ಮನದಾಳದಿಂದ ಒಂದು ಮಾತನ್ನು ಹೇಳಲಿಚ್ಛಿಸುತ್ತೇವೆ. 
ನಮ್ಮ ರಾಷ್ಟ್ರಕವಿ ಕುವೆಂಪುರವರು,
 “ಕನ್ನಡಕ್ಕಾಗಿ ‘ಕೈ’ ಎತ್ತು, ನಿನ್ನ ‘ಕೈ’ ಕಲ್ಪವೃಕ್ಷವಾಗುತ್ತದೆ” ಎಂದು ಸಾರಿದ್ದಾರೆ. 
ನಾವೂ ಕೂಡ ಅವರ ಧಾಟಿಯಲ್ಲಿಯೇ “ಕನ್ನಡಕ್ಕಾಗಿ ಕೆಮ್ಮು” ಎಂದು ಹೇಳುತ್ತಿದ್ದೇವೆ. 
ನಾವು ಕನ್ನಡಕ್ಕಾಗಿ ಕೆಮ್ಮಿದರೆ ಕನ್ನಡವನ್ನು ಕಂಡು 
ಮತ್ತು ಕನ್ನಡ ಮಾತನಾಡುವವರನ್ನು ಕಂಡು ಕೆನೆದು 
ಗಂಟಲನ್ನು ಸರಿಪಡಿಸಿಕೊಂಡು ‘ಹುಸಿಕೆಮ್ಮು’ 
ಮತ್ತು ಕೃತ್ರಿಮ ‘ಕುಹಕಕೆಮ್ಮ’ ಕೆಮ್ಮುವವರ ಕೆಮ್ಮು 
ಆ ತಕ್ಷಣ ಕಡಿಮೆಯಾಗುತ್ತದೆ. 
ಮತ್ತದು ತಣ್ಣಗಾಗುತ್ತದೆ. 

No comments:

Post a Comment