Tuesday, December 8, 2015

Good Evening, 8th December 2015

Good Evening
8th December 2015 
@ Hiremath, Tumkur 
                                                            ವಿದ್ಯಾರ್ಥಿ ಜೀವನದಲ್ಲಿ 
                        ಅಂಕಾರ್ಜನೆಗಿಂತ ಜ್ಞಾನಾರ್ಜನೆ ತುಂಬ ಮುಖ್ಯ.
                                                                              ಡಾ. ಶಿವಾನಂದ ಶಿವಾಚಾರ್ಯರು

ಇದು, “ಮಾತೃ ದೇವೋ ಭವ”, “ಪಿತೃ ದೇವೋ ಭವ”, “ಆಚಾರ್ಯ ದೇವೋ ಭವ”...,
ಎಂದಿತ್ಯಾದಿ ಅಂದುಕೊಂಡಿರುವ ಕಾಲವಲ್ಲ. ಇದು, “ಈಪ್ಸಿತ ದೇವೋ ಭವ” ಮತ್ತು “ಇಷ್ಟಾರ್ಥ ದೇವೋ ಭವ” ಎಂದಂದುಕೊಂಡಿರುವ ಕಾಲ. ಅಹುದು, ಈ ಕಾಲದಲ್ಲಿ ಪ್ರತಿಶತ ನೂರಕ್ಕೆ ನೂರು ಜನಗಳಿಗೆ 
ಅವರ ಈಪ್ಸಿತವೇ ದೇವರು. ಅಂಥ ಜನಗಳು ತಾವು ಇಷ್ಟಪಟ್ಟದ್ದನ್ನು ಅದೆಷ್ಟು ಕಷ್ಟವಾದರೂ ಸರಿ, ತಮ್ಮದಾಗಿಸಿಕೊಳ್ಳಲೇಬೇಕು ಎಂಬ ಹಟವನ್ನು ಹೊಂದಿರುತ್ತಾರೆ.
        ಈ ಕಾಲದಲ್ಲಿ ಗುರುದೇವರಿಗಿಂತಲೂ ಗುರಿದೇವರು ಮುಖ್ಯ ಎಂಬಂತಾಗಿದೆ. 
ಅವರವರಿಗೆ ಅವರ ಗುರಿಯೇ ಮುಖ್ಯ ಮತ್ತು ಅದುವೇ ಅವರ ದೇವರು. 
ಗುರುದೇವರಿಗಿಂತಲೂ ಗುರಿದೇವರು ಮುಖ್ಯ. 
ಈಗ “ಗುರುದೇವೋ ಮಹಾದೇವೋ” ಎಂದು ಹೇಳುವ ಹಾಗಿಲ್ಲ. 
ಈಗ “ಗುರಿದೇವೋ ಮಹಾದೇವೋ” ಎಂದು ಹೇಳಬೇಕಿದೆ. 
ಇವತ್ತಿನ ಕಾಲಘಟ್ಟದಲ್ಲಿ ಗುರುಕೃಪೆಗಿಂತಲೂ ಗುರಿಸಾಧನೆ ತುಂಬ ಮುಖ್ಯ.
‘ಗುರು’ ಹಿಂದಿರುತ್ತಾನೆ. ‘ಗುರಿ’ ಮುಂದಿರುತ್ತದೆ.
 “ನಮ್ಮ ಮುಂದಿರೋದು ನಮ್ಮ ಆದರ್ಶವಾಗಬೇಕು”
ಮತ್ತು “ಅದು ನಮ್ಮ ಧ್ಯೇಯವಾಗಬೇಕು” ಎಂಬುವುದು
ಇವತ್ತಿನ ಬಹುಪಾಲು ಜನಗಳ ಅಂಬೋಣ ಮತ್ತು ಅಭಿಪ್ರಾಯ.
       ಗುರಿ ತಲುಪಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಶ್ರದ್ಧೆ ಮತ್ತು ಶ್ರಮಗಳ 
ಕೂಡಲಸಂಗಮವಾಗಿ ನಿಂತುಕೊಳ್ಳಬೇಕು. ನಾವು ಗಮನಿಸಿದ ಹಾಗೆ
ಬಹುತೇಕರು ತಮ್ಮ ಬದುಕಿಗೊಂದು ಗುರಿಯನ್ನು ನಿಗದಿಪಡಿಸಿಕೊಂಡಿರುತ್ತಾರೆ.
ಆದರೆ ಗುರಿಯತ್ತ ಧಾವಿಸುವ ಸಂದರ್ಭದಲ್ಲಿ ಕೆಲವರು ಎಡವಿದರೆ
ಇನ್ನೂ ಕೆಲವರು ಗುರಿ ತಲುಪುವ ಮುನ್ನವೇ ‘ಎಡವಟ್ಟು’ ಮಾಡಿಕೊಳ್ಳುತ್ತಾರೆ.
ಗುರಿ ತಲುಪಲು ‘ಭಗೀರಥ ಪ್ರಯತ್ನ’ ಮತ್ತು ‘ಬ್ರಹ್ಮಾಂಡ ಪ್ರಯತ್ನ’ ಮಾಡಬೇಕು.
 ಹಾಗೆ ಮಾಡಬೇಕೆಂದರೆ ಅದಕ್ಕೊಂದು ದೊಡ್ಡ ಪ್ರಮಾಣದ ಏಕಾಗ್ರತೆ ಬೇಕು.
ಏಕಾಗ್ರತೆ ಇದ್ದರೆ ಗುರಿ, ಅಂಗೈನೆಲ್ಲಿಯಾಗುತ್ತದೆ.
ಏಕಾಗ್ರತೆ ಇಲ್ಲದೆ ಹೋದರೆ ಗುರಿಯದು ಗಗನಕುಸುಮವಾಗುತ್ತದೆ.
ಅದೊಂದು ಕಾಲವಿತ್ತು. ಋಷಿ-ಮುನಿಗಳು ತಪಸ್ಸು ಮಾಡಿಕೊಂಡಿರುವಾಗ
ಅವರ ಮನೋ-ಏಕಾಗ್ರತೆಯನ್ನು ಭಂಗಮಾಡಲು ರಂಭೆ, ಊರ್ವಶಿ, 
ಮೇನಕೆ, ತಿಲೋತ್ತಮೆ..., ಇತ್ಯಾದಿ ಅಪ್ಸರೆಯರು ಬರುತ್ತಿದ್ದರು. 
ಅವರು ತಮ್ಮ ಹಾವಭಾವ,
ವಿಲಾಸ, ವೈಯ್ಯಾರಗಳಿಂದ ಋಷಿಗಳ ತಪಸ್ಸನ್ನು ಹಾಳುಮಾಡುತ್ತಿದ್ದರು.
ಅಷ್ಟು ಮಾತ್ರವಲ್ಲ, ಆ ಋಷಿ-ಮುನಿಗಳ ಕೈಗೆ ಪುಟ್ಟ ಕಂದಮ್ಮಗಳನ್ನು ಕೊಟ್ಟು ಅದೃಶ್ಯವಾಗುತ್ತಿದ್ದರು. 
ಇಷ್ಟಾರ್ಥಸಿದ್ಧಿಗಾಗಿ ಘೋರ-ಘನಘೋರ
ತಪಸ್ಸು ಮಾಡಿಕೊಂಡಿದ್ದ ಋಷಿಮುನಿಗಳು ತಮ್ಮ ಈಪ್ಸಿತದಿಂದ ವಂಚಿತರಾಗಿ
ಲಾಲಿ ಹಾಡಿಕೊಂಡು ಅಪ್ಸರೆಯರು ಹೆತ್ತುಕೊಟ್ಟ ಮಕ್ಕಳನ್ನು ಜೋಪಾನಮಾಡಿಕೊಂಡಿರಬೇಕಾಗುತ್ತಿತ್ತು.
ಬದುಕಿನಲ್ಲಿ ವಾಂಛಿತ ಗುರಿಯನ್ನು ತಲುಪುವುದು
 ಅಷ್ಟೊಂದು ಸುಲಭದ ಮಾತಲ್ಲ.
ಗುರಿ ತಲುಪಲಿಚ್ಛಿಸುವವರು ‘ಏಕಾಂತ’ ಮತ್ತು ‘ಏಕಾಗ್ರತೆ’
ಎರಡನ್ನೂ ತಮ್ಮ ಬದುಕಿನ ಅವಿಭಾಜ್ಯ ಅಂಗಗಳನ್ನಾಗಿಸಿಕೊಳ್ಳಬೇಕು.
 ಏಕಾಂತದಲ್ಲಿ ಪಶುಪತಿಯಂತಿರಬೇಕು. ಏಕಾಗ್ರತೆಯಲ್ಲಿ ಪಾರ್ಥನಂತಿರಬೇಕು.
ಆಗ ಮಾತ್ರ ಗುರಿಸಾಧನೆ ಸಾಧ್ಯ.
       ಎಲ್ಲರಿಗಿಂತಲೂ ವಿದ್ಯಾರ್ಥಿಗಳಿಗೆ ಏಕಾಂತ ಮತ್ತು ಏಕಾಗ್ರತೆ ಹೆಚ್ಚು ಆವಶ್ಯಕ. 
ಏಕಾಂತ ಮತ್ತು ಏಕಾಗ್ರತೆಗಳ ವಿಷಯದಲ್ಲಿ ವಿದ್ಯಾರ್ಥಿಗಳು ‘ಕಾಂಪ್ರೋಮೈಜ್’ ಮಾಡಿಕೊಳ್ಳಬಾರದು.
ಅವರು ಯಾವಾಗಲೂ “ಕಣತ್ಯಾಗೇ ಕುತೋ ಧನಂ, ಕ್ಷಣತ್ಯಾಗೇ ಕುತೋ ವಿದ್ಯಾ” ಎಂಬ ಮಾತನ್ನು 
ತಮ್ಮ ಜ್ಞಾಪಕದಲ್ಲಿಟ್ಟುಕೊಂಡಿರಬೇಕು. ಸಮಯವನ್ನು ಅವರು ತುಂಬ ಲೆಕ್ಕಾಚಾರ ಮಾಡಿಬಿಟ್ಟು ವ್ಯಯಿಸಬೇಕು.
ಅವತ್ತಿನ ಕಾಲಕ್ಕಿಂತಲೂ ಇವತ್ತಿನ ಕಾಲದಲ್ಲಿ ಮನೋನಿಗ್ರಹ ಮಾಡುವುದು ತುಂಬ ಕಷ್ಟವೆನಿಸಿದೆ. 
ವಿದ್ಯಾರ್ಥಿ ಯಾವಾಗಲೂ ಆಮಿಷ ಮತ್ತು ಆಕರ್ಷಣೆಯಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು.
 ಅವುಗಳನ್ನು ಆತ ತನ್ನಿಂದ ಗಾವುದ ಗಾವುದ ದೂರ ನಿಲ್ಲಿಸಿರಬೇಕು.
ಅವತ್ತಿನ ಕಾಲದಲ್ಲಿ ಋಷಿ-ಮುನಿಗಳ ‘ತಪೋಭಂಗ’ ಮಾಡಲು ಮತ್ತು ಅವರ ಏಕಾಗ್ರತೆಯನ್ನು ಕೆಡಿಸಲು 
ರಂಭೆ, ಊರ್ವಶಿ, ಮೇನಕೆಯರಂಥ ಸುರಸುಂದರಿಯರು ಬಂದು ನಿಂತುಕೊಳ್ಳುತ್ತಿದ್ದರು. 
ಈಗ ಅವರ ಸ್ಥಾನಮಾನ ಮತ್ತು ಕೆಲಸ-ಕಾರ್ಯಗಳನ್ನು 
ಮೊಬೈಲ್, ಇಂಟರ್‌ನೆಟ್, ಫೇಸ್‌ಬುಕ್, ವಾಟ್ಸ್‌ಆಪ್‌ಗಳು ಆಕ್ರಮಿಸಿಕೊಂಡಿವೆ.
ಅದೊಂದು ವೇಳೆ ಸಾವಿಲ್ಲದ ಮನೆಯಿಂದ ಸಾಸುವೆಯನ್ನು ತರಲು ಸಾಧ್ಯವಾದೀತು.
 ಆದರೆ ಇವತ್ತಿನ ಕಾಲದಲ್ಲಿ ಮೊಬೈಲ್ ಇಲ್ಲದ ಮನೆಯಿಂದ ಸೊಸೆಯನ್ನು ತರುವುದು ಸಾಧ್ಯವಿಲ್ಲ ಎಂಬಂತಾಗಿದೆ.
ಇವತ್ತಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳ ‘ಅಧ್ಯಯನಭಂಗ’ ಮಾಡಲು,
ಮತ್ತವರ ಏಕಾಗ್ರತೆಯನ್ನು ಹಾಳುಮಾಡಲು ಮಾರುಕಟ್ಟೆಗಳಲ್ಲಿ ಸಾಕಷ್ಟು ಪರಿಕರ
ಮತ್ತು ಸಾಮಗ್ರಿಗಳು ಬಂದುಬಿಟ್ಟಿವೆ. ವಿದ್ಯಾರ್ಥಿಗಳು ಅವುಗಳಿಂದ ಬಚಾವಾಗಿ ಬದುಕುವುದು ಕಷ್ಟ. 
ನಮ್ಮ ವಿದ್ಯಾರ್ಥಿಗಳು ಮೊಬೈಲ್, ಇಂಟರ್‌ನೆಟ್, ವ್ಯಾಟ್ಸ್‌ಆಪ್....., 
ಇತ್ಯಾದಿ ರೂಪದಲ್ಲಿ  ಕಾಣಿಸಿಕೊಳ್ಳುತ್ತಿರುವ  
ಈ ಆಧುನಿಕ ಅಪ್ಸರೆಯರಿಂದ ಅಂತರವನ್ನು ಕಾಯ್ದುಕೊಳ್ಳಬೇಕು. 
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ವಿಷಯದಲ್ಲಿ ಹೆಚ್ಚು ಹೆಚ್ಚು ಜಾಗರೂಕರಾಗಿರಬೇಕು. 
ವಿದ್ಯಾರ್ಥಿಗಳಲ್ಲಿ ಓದು ಮತ್ತು ಅಧ್ಯಯನದ ವಿಷಯದಲ್ಲಿ ನಿಜವಾದ ತುಡಿತ-ಮಿಡಿತಗಳಿದ್ದರೆ 
ಬಾಹ್ಯ ಎಳೆತ-ಸೆಳೆತಗಳು ಅವರನ್ನೇನೂ ಮಾಡಲಾರವು.
ನಮ್ಮ ವಿದ್ಯಾರ್ಥಿಗಳು ಏಕಾಂತ ಮತ್ತು ಏಕಾಗ್ರತೆಯ ಜೊತೆಯಲ್ಲಿ 
ಸ್ನೇಹಿತರ ಆಯ್ಕೆಯ ವಿಷಯದಲ್ಲಿ ತುಂಬ ಜಾಗರೂಕರಾಗಿರಬೇಕು. 
ಸಾಮಾನ್ಯವಾಗಿ ಸಮಾನವಯಸ್ಕರು ಮತ್ತು ಸಮಾನಮನಸ್ಕರುಗಳಲ್ಲಿ ಸ್ನೇಹ ಚಿಗಿತುಕೊಳ್ಳುತ್ತದೆ.
ಇದು ಸಾರ್ವಕಾಲಿಕ ಸತ್ಯ. ಈ ಮಾತನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಸಂಸ್ಕೃತದಲ್ಲಿ ಒಂದು ಮಾತಿದೆ, “ಸಮಾನವ್ಯಸನೇಷು ಸಖ್ಯಮ್” ಎಂದು.
 ಸಮಾನ ರುಚಿ-ಅಭಿರುಚಿಗಳನ್ನು ಹೊಂದಿರುವವರು ಪರಸ್ಪರ ಸ್ನೇಹಿತರಾಗುತ್ತಾರೆ. 
ಆಗಲಿ, ಅದಕ್ಕೇನಂತೆ? ಇದೇನೋ ಒಪ್ಪಬೇಕಾದ ಮಾತೇ ಸರಿ. 
ಆದರೆ ವ್ಯಸನ-ದುರ್ವ್ಯಸನಗಳಿರುವ ಸಮಾನಮನಸ್ಕರಲ್ಲಿನ ಸ್ನೇಹ ಒಳ್ಳೆಯದಲ್ಲ. 
ಅಂಥವರೊಂದಿಗೆ ಗೆಳೆತನ ಮಾಡುವುದು ಬೇಡ. 
ಅಂಥವರ ಗೆಳೆತನವು ಮುಂದಿನ ಉಜ್ವಲ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ.
ಇವತ್ತಿನ ಕಾಲದಲ್ಲಿ ಬಹುತೇಕ ಮಕ್ಕಳ ಮೇಲೆ ತಂದೆ-ತಾಯಿ, ಬಂಧು-ಬಳಗ, 
ಗುರು-ಹಿರಿಯರು, ನೆಂಟರಿಷ್ಟರು-ಹಿತೈಷಿಗಳಿಗಿಂತ ಅವರ ಶಾಲಾ, ಕಾಲೇಜುಗಳ ಗೆಳೆಯರು ಹೆಚ್ಚು ಪ್ರಭಾವ ಬೀರುತ್ತಾರೆ.
ಈ ಅಂಶವು ಸರ್ವೇ ಸಾಮಾನ್ಯವಾಗಿ ಎಲ್ಲರ ಗಮನಕ್ಕೂ ಬಂದಿರುತ್ತದೆ.
 ನಮ್ಮ ಮಕ್ಕಳು ನಮಗೆ ಈತ ಅಥವಾ ಈಕೆ “ನನ್ನ ಬೆಸ್ಟ್ ಫ್ರೆಂಡ್” ಎಂದು ಪರಿಚಯಿಸುತ್ತಾರೆ. 
ಆತ ಅಥವಾ ಆಕೆ ನಮ್ಮ ಮಕ್ಕಳ ‘ಬೆಸ್ಟ್ ಫ್ರೆಂಡ್’ ಆಗಿದ್ದರೆ ‘ಓಕೆ’!! ತೊಂದರೆ ಏನಿಲ್ಲ. 
ಆದರೆ ಅವರು ‘ಬೆಸ್ಟ್ ಫ್ರೆಂಡ್’ ಎಂದು ನಂಬಿದ ಗೆಳೆಯರು ‘ವರ್ಸ್ಟ್ ಫ್ರೆಂಡ್’ ಆಗಿ ಸಾಬೀತಾದರೆ 
ನಮ್ಮ ಮಕ್ಕಳ ಭವಿಷ್ಯವದು ಡೋಲಾಯಮಾನವಾಗುತ್ತದೆ. 
ಆದ್ದರಿಂದ ಸ್ನೇಹಿತರ ಆಯ್ಕೆಯಲ್ಲಿ 
ನಾವು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು.
 ಮಕ್ಕಳು ನಮಗೆ, “ನೀವು ನಮ್ಮ ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸುತ್ತಿದ್ದೀರಿ” ಎಂದು ಬಯ್ದರೂ ಸರಿ, ಬೇಸರಿಸಿಕೊಂಡರೂ ಸರಿ, ಅವರನ್ನು ಯೋಗ್ಯ ಸ್ನೇಹಿತರ ಸಂಪರ್ಕ ಮತ್ತು ಸುಪುರ್ದಿನಲ್ಲಿಡುವುದು ಪ್ರತಿಯೊಬ್ಬ ತಂದೆ-ತಾಯಿ ಮತ್ತು ಪಾಲಕ-ಪೋಷಕರುಗಳ ಆದ್ಯಕರ್ತವ್ಯ. ಈ ವಿಷಯದಲ್ಲಿ ಪಾಲಕರು ನಿಗಾಮಾಡಬೇಕು.
ಈಗ ಮತ್ತು ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳುಗಳ ಫ್ರೆಂಡ್ಸ್‌ಗಳ ಕ್ಷಿತಿಜ ದೊಡ್ಡದಾಗುತ್ತಲಿದ್ದು ಅದರಲ್ಲೂ “ಬಿ. ಎಫ್.” (ಬಾಯ್ ಫ್ರೆಂಡ್ಸ್)ಗಳ ಜೊತೆ-ಜೊತೆಯಲ್ಲಿ ಮತ್ತು “ಜಿ. ಎಫ್.”(ಗರ್ಲ್ ಫ್ರೆಂಡ್ಸ್)ಗಳ ಮತ್ತು “ಜಿ. ಎಫ್.”ಗಳ ಜೊತೆ-ಜೊತೆಯಲ್ಲಿ
“ಬಿ. ಎಫ್”ಗಳ ಸೇರ್ಪಡೆ ಆಗುತ್ತಲಿದೆ. ಇಂಥ ಸಂದರ್ಭಗಳಲ್ಲಿ ಬಾಯ್ ಫ್ರೆಂಡೇ ಇರಲಿ, ಗರ್ಲ್ ಪ್ರೆಂಡೇ ಇರಲಿ, ಒಟ್ಟಿನಲ್ಲಿ “ಫ್ರೆಂಡ್ಸ್ ಸರ್ಕಲ್” ಚೆನ್ನಾಗಿದ್ದರೆ ಮಾತ್ರ  ಮಕ್ಕಳು ಸರಿದಾರಿಯಲ್ಲಿರುತ್ತಾರೆ. “ಫ್ರೆಂಡ್ಸ್ ಸರ್ಕಲ್” ಸರಿ ಇಲ್ಲದೆ ಹೋದರೆ ಅವರು ಅಡ್ಡದಾರಿಯಲ್ಲಿರುತ್ತಾರೆ. ಉತ್ತಮರ ಜೊತೆ ಮತ್ತು ಉತ್ತಮ ಸ್ನೇಹಿತರ ಸಂಗದಲ್ಲಿ ಇರುವಂತೆ 
ಮಕ್ಕಳಿಗೆ ಆಗಾಗ್ಗೆ ತಿಳಿಹೇಳುತ್ತಿರಬೇಕು. 
ಅಂಥಿಂಥ ಗೆಳೆಯರನ್ನೇ ಉತ್ತಮರೆಂದು ಭಾವಿಸಿಕೊಂಡುಹೋಗದಂತೆ
 ಅವರನ್ನು ಮತ್ತೆ ಮತ್ತೆ ಎಚ್ಚರಿಸಿಕೊಂಡಿರಬೇಕು.
ವಿದ್ಯಾರ್ಥಿಗಳು ಒಳ್ಳೆಯದನ್ನು ನೋಡುವುದನ್ನು, ಕೇಳುವುದನ್ನು, 
ಮಾಡುವುದನ್ನು ಮತ್ತು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಆದರ್ಶ ವ್ಯಕ್ತಿ 
ಹಾಗೂ ವ್ಯಕ್ತಿತ್ವಗಳನ್ನು ತಮ್ಮ ಕನಸು-ಮನಸುಗಳಲ್ಲಿ ತುಂಬಿಕೊಂಡಿರಬೇಕು.
ಆದರ್ಶ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಬದುಕಿಗೆ ಪ್ರೇರಣೆಯಾಗುತ್ತಾರೆ. 
ಆದರ್ಶ ವ್ಯಕ್ತಿತ್ವಗಳ ಪ್ರಭಾವವು ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. 
ಇದರಲ್ಲಿ ಎರಡು ಮಾತಿಲ್ಲ.
ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟ್ಯಾಗೋರ್, ನೇತಾಜಿ ಸುಭಾಷಚಂದ್ರ ಬೋಸ್,
ಸ್ವಾಮಿ ರಾಮತೀರ್ಥ, ಮಹರ್ಷಿ ಅರವಿಂದ, ಮದರ್ ತೆರೆಸ್ಸಾರಂಥ ಮಹಾನುಭಾವರು
ನಮ್ಮ ವಿದ್ಯಾರ್ಥಿಗಳ ಬದುಕನ್ನು ಬರೀ ಸ್ಫೂರ್ತಿಯುತ ಮಾತ್ರವಲ್ಲ;
ಅವರು ನಮ್ಮ ವಿದ್ಯಾರ್ಥಿಗಳ ಬದುಕನ್ನು ಸ್ಫುರದ್ರೂಪಿ ಕೂಡ ಆಗಿಸಬಲ್ಲರು.
ಅಂಥವರ ದಿವ್ಯ ಭವ್ಯ ಬದುಕನ್ನು ನಮ್ಮ ವಿದ್ಯಾರ್ಥಿಗಳು ಪಾಠವಾಗಿಸಿಕೊಳ್ಳಬೇಕು
ಮತ್ತು ಅವರುಗಳ ಬದುಕನ್ನು ಪಠ್ಯವಾಗಿಸಿಕೊಂಡು ಓದಬೇಕು.
      ನಮ್ಮ ದೃಷ್ಟಿಯಲ್ಲಿ ಈ ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. 
ಇವತ್ತಿನ ಕಾಲಘಟ್ಟದಲ್ಲಿ ಅವತ್ತಿನ ಮಹಾಭಾರತದಲ್ಲಿನ ಹಾಗೆ ವಿದುರನೀತಿಯ ಅಗತ್ಯವಿಲ್ಲ.
ಈಗ ವಿದುರನೀತಿಗಿಂತಲೂ ವಿದ್ಯಾರ್ಥಿನೀತಿ ಮುಖ್ಯ.
ವಿದ್ಯಾರ್ಥಿಗಳು ತಮ್ಮ ತನು-ಮನಗಳಲ್ಲಿ ವಿದ್ಯಾಧಿದೇವತೆ ಸರಸ್ವತಿಯನ್ನು 
ಆಹ್ವಾನಿಸಿಕೊಂಡು ಆಮೂಲಾಗ್ರವಾಗಿ ಅಧ್ಯಯನಮಾಡಿ ಪಾರಂಗತರಾಗಬೇಕು
ಮತ್ತು ಪರಿಣತರಾಗಬೇಕು.
ಅದರ ಜೊತೆಯಲ್ಲಿ ದೇಶಪ್ರೇಮ ಮತ್ತು ದೇಶಭಕ್ತಿಯನ್ನು ಕೂಡ 
ಆಪಾದಮಸ್ತಕಗೊಳಿಸಿಕೊಂಡಿರಬೇಕು.
ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ವಿದ್ಯಾಭ್ಯಾಸವನ್ನು
ಬರೀ ಅಂಕಾರ್ಜನೆಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ 
ಅದನ್ನು ‘ಮೇರುಸದೃಶ’ ಜ್ಞಾನಾರ್ಜನೆಗೆ  ಮತ್ತು ಚಾರಿತ್ರ್ಯನಿರ್ಮಾಣಕ್ಕೆ ಸೋಪಾನವಾಗಿಸಿಕೊಳ್ಳಬೇಕು.

No comments:

Post a Comment