Sunday, November 29, 2015

Good Evening
28th November 2015



ಕನ್ನಡಿಗರದು ‘ಪುಣ್ಯಕೋಟಿ’ ಜಾಯಮಾನ.
ಕನ್ನಡಿಗರು ‘ಪುಣ್ಯಕೋಟಿ’ ವಂಶಸ್ಥರು
ಡಾ. ಶಿವಾನಂದ ಶಿವಾಚಾರ್ಯರು

ತುಮಕೂರು ೨೮ : “ಕನ್ನಡಿಗರದು ‘ಪುಣ್ಯಕೋಟಿ’ ಜಾಯಮಾನ.
ಕನ್ನಡಿಗರು ‘ಪುಣ್ಯಕೋಟಿ’ ಇದ್ದ ಹಾಗೆ. ನಮ್ಮೀ ವೀರಕನ್ನಡಿಗರು ಪುಣ್ಯಕೋಟಿ ಪರಂಪರೆಯ ಹರಿಕಾರರು. ಪುಣ್ಯಕೋಟಿ ನಮಗೆಲ್ಲ “ಹಿಂದೆ ಬಂದರೆ ಒದೆಯಬೇಡಿ.
ಮುಂದೆ ಬಂದರೆ ಹಾಯಬೇಡಿ” ಎಂದು ಪಾಠಮಾಡಿದೆ.
ಅಂದು ಆ ಪುಣ್ಯಕೋಟಿ ನಮಗೆ ಹೇಳಿಕೊಟ್ಟ ಪಾಠವನ್ನು
ನಾವು-ನೀವುಗಳೆಲ್ಲ ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದೇವೆ.

ನಾವು ಕನ್ನಡಿಗರು ಹಿಂದೆ ಬಂದವರಿಗೆ ಒದೆಯುವುದಿಲ್ಲ. ಮುಂದೆ ಬಂದವರಿಗೆ ಹಾಯುವುದಿಲ್ಲ. ನಮ್ಮ ಮೇಲೇರಿ ಬಂದರೆ ನಾವು ‘ಕಮಕ್’ ಎನ್ನುವುದಿಲ್ಲ.
ನಾವು ‘ಕಿಮಕ್’ ಎನ್ನುವುದಿಲ್ಲ. ನಮ್ಮ ಮೇಲೆ ಬೇರೆಯವರು ನುಗ್ಗಿಕೊಂಡು ಬಂದರೆ, ಮತ್ತವರು ನಮ್ಮ ನೆಲ-ಜಲಗಳನ್ನು ‘ಒತ್ತುವರಿ’ ಮಾಡಿಕೊಂಡಿದ್ದರೆ
ನಾವು ‘ಪುಕಾರು’ ಮಾಡುವುದಿಲ್ಲ ಮತ್ತು ನಾವು ‘ತಕರಾರು’ ಮಾಡುವುದಿಲ್ಲ.
ಏಕೆಂದರೆ ನಾವು ‘ಪುಣ್ಯಕೋಟಿ’ ವಂಶಸ್ಥರು.
ಇದು ಕಾರಣವಾಗಿ ನಮ್ಮ ನಾಡು, ನುಡಿ ಹಾಗೂ ನೆಲ-ಜಲಗಳು
ಧಾರಾಳವಾಗಿ ಒತ್ತುವರಿಗೆ ವಸ್ತುವಾಗಿವೆ ಮತ್ತು ಆಗುತ್ತಲಿವೆ”
ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯರು
ನಿನ್ನೆ ತುಮಕೂರಿನ ಮಂಡಿಪೇಟೆಯಲ್ಲಿ ಮಂಡಿಪೇಟೆ ಕನ್ನಡ ಯುವಕರ ಸಂಘ ಹಾಗೂ ಶ್ರಮಜೀವಿಗಳ ಸಂಘ ಸಂಯುಕ್ತವಾಗಿ ಏರ್ಪಡಿಸಿದ ವೈಭವದ ನಾಲ್ಕನೆಯ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.

ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ಬೆಳಗಾವಿ ಮತ್ತು ಇತರೇ ಗಡಿಪ್ರದೇಶಗಳಲ್ಲಿ
‘ನೆಲ’ ಒತ್ತುವರಿ ನಡೆದುಕೊಂಡಿದ್ದರೆ ಬೆಂಗಳೂರಿನಲ್ಲಿ ‘ನುಡಿ’ ಒತ್ತುವರಿ ನಡೆದುಕೊಂಡಿದೆ. ಇವತ್ತಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರು
ಸಿಕ್ಕರೆ ಸ್ವರ್ಗ ಸಿಕ್ಕಂತೆನಿಸುತ್ತದೆ. ಬೆಂಗಳೂರು ಪರಪ್ರದೇಶೀಯರ ಮತ್ತು ಪರಭಾಷಾದೌರ್ಜನ್ಯದ ಕೇಂದ್ರಬಿಂದುವಾಗಿದೆ.

ಅವತ್ತೊಂದು ದಿನ “ಮಿಲ್ಕಿ ಬ್ಯೂಟಿ” ಹಾಗೂ “ಸಿಲ್ಕ್ ಸಿಟಿ”ಯಂತಿದ್ದ
ಬೆಂಗಳೂರು ಈಗ ‘ಸಿಲಿಕಾನ್ ಸಿಟಿ’ಯಾಗಿಬಿಟ್ಟಿದೆ.
ಅಂದು ಆ ಬೋರೇಗೌಡ, ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಬಂದು ಖುಷಿಪಟ್ಟಿದ್ದ.
ಇಂದು ಆ ಬೋರೇಗೌಡರಿಗೆ ಮತ್ತು ಕೆಂಪೇಗೌಡರಿಗೇನೇ ಬೆಂಗಳೂರಲ್ಲಿ ಇರುವುದು ಕಷ್ಟವಾಗುತ್ತಿದೆ.
ಮೊನ್ನೆ ಅದಾರೋ ಒಬ್ಬ ಸಾಹಿತಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಕೂಡ ಬದಲಾಯಿಸಬಹುದು ಎಂದು ಸೂಚಿಸಿದುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮೊದಲು ಮಾಡಿಕೊಂಡು ನಾವೆಲ್ಲ ಕೇಳಿಸಿಕೊಂಡಿದ್ದೇವೆ.

ಅದೊಂದು ಕಾಲದಲ್ಲಿ ಸುಂದರವಾದ ಉಪವನದಂತಿದ್ದ ಮತ್ತು ಚೆಂದವಳ್ಳಿ ತೋಟದಂತಿದ್ದ ಬೆಂಗಳೂರು ಮಹಾನಗರ ಈಗ ತ್ಯಾಜ್ಯ, ವ್ಯಾಜ್ಯಗಳ ರಾಜಧಾನಿಯಾಗಿ ಪರಿಣಮಿಸಿದೆ.
ದಂತದ ಬೊಂಬೆಯಂತಿದ್ದ ಬೆಂಗಳೂರು ಮಹಾನಗರ ಇಂದು ಗೀಜಗನ ಗೂಡಾಗಿದೆ. ನಿಜಕ್ಕೂ ಅದರ ಪರಿಸ್ಥಿತಿ ನಂಜನುಂಡ ಆ ನಂಜುಂಡನಂತಾಗಿದೆ.
ಕನ್ನಡಿಗರು ಸ್ವಭಾವತಃ ಸಹಿಷ್ಣುಗಳು. ನಮ್ಮ ಕನ್ನಡಿಗರು
ಬರೀ ಪರಧರ್ಮ, ಪರಭಾಷಾ ಸಹಿಷ್ಣುಗಳಾಗಿದ್ದರೆ ಪರವಾ ಇಲ್ಲ.
ಅವರು ಅನ್ಯಜನದೌರ್ಜನ್ಯಸಹಿಷ್ಣುಗಳಾಗಿ ಇರುವುದು ಬೇಡ.

ನಾವು ಒಮ್ಮೆ ದೌರ್ಜನ್ಯಸಹಿಷ್ಣುಗಳೆಂದು ಬೇರೆಯವರಿಗೆ ಗೊತ್ತಾದರೆ ಸಾಕು,
ಅವರು ನಮ್ಮನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತಾರೆ,
 ಸಮುದ್ರವನ್ನೇ ಆಪೋಶಣ ಮಾಡಿದ ಆ ಅಗಸ್ತ್ಯ ಮಹರ್ಷಿಯಂತೆ.
ನಮ್ಮಲ್ಲಿನ ಸೌಜನ್ಯವದು ಇನ್ನೊಬ್ಬರಲ್ಲಿನ ದೌರ್ಜನ್ಯವು
ಇಮ್ಮಡಿ-ಮುಮ್ಮಡಿಗೊಳ್ಳುವುದಕ್ಕೆ ಅವಕಾಶ ಕೊಡುವುದು ಬೇಡ.

“ಹೋಗಲಿ ಬಿಡು, ಇರಲಿ ಬಿಡು” ಎಂಬ ಮಾತನ್ನು ಇದುವರೆಗೆ ಮಂತ್ರದೋಪಾಧಿಯಲ್ಲಿ ಉಚ್ಚರಿಸಿಕೊಂಡಿದ್ದುದೇ ನಮಗೀಗ ಮುಳ್ಳಾಗಿ ಪರಿಣಮಿಸಿದೆ. ಅದು ಕಾರಣವಾಗಿಯೇ ನಾವುಗಳು ಎಲ್ಲ ವಿಧದ ಒತ್ತುವರಿಗಳಿಗೂ ಒಳಪಡುವ ಹಾಗಾಗಿದೆ. ನಾವು ಈಗ, ಈ ಕ್ಷಣದಿಂದಲೇ ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಆಸ್ತಿ-ಪಾಸ್ತಿಗಳಷ್ಟೇ ಅಲ್ಲ, ನಮ್ಮಗಳ ಅಸ್ತಿತ್ವವೂ ಕೂಡ ಹೇಳಹೆಸರಿಲ್ಲದಂತಾಗುತ್ತದೆ. ನಾವೀಗ ಸಾಧುವಿಂಗೆ ಸಾಧುವಾಗಿ ಬಾಧಿಪರ ಪಾಲಿಗೆ ಬಾಧಿಪರಾಗಿ ನಿಂತುಕೊಳ್ಳಬೇಕಾಗಿದೆ. “ಶಠಂ ಪ್ರತಿ ಶಾಠ್ಯಮ್” ನೀತಿಯನ್ನು ಅನುಸರಿಸಬೇಕಾಗಿದೆ” ಎಂದು ಹೇಳಿದರು.

ಮಂಡಿಪೇಟೆಯ ಹಿರಿಯ ವರ್ತಕರಾದ ಶ್ರೀ ಸಿ. ಎ. ಸೋಮೇಶ್ವರ ಗುಪ್ತಾರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ತುಮಕೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಸೈಯದ್ ನಯಾಜ್ ಅಹಮದ್‌ರವರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಕೆ. ನಾರಾಯಣಮೂರ್ತಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಲಕ್ಷ್ಮಿನರಸಿಂಹಯ್ಯನವರು ಪ್ರಾರ್ಥನಾ ಗೀತೆಯನ್ನು ಹೇಳಿ ಸಮಾರಂಭದ ನಿರೂಪಣೆ ಮಾಡಿದರು. 

No comments:

Post a Comment