Sunday, November 29, 2015

Good Evening
28th November 2015



ಕನ್ನಡಿಗರದು ‘ಪುಣ್ಯಕೋಟಿ’ ಜಾಯಮಾನ.
ಕನ್ನಡಿಗರು ‘ಪುಣ್ಯಕೋಟಿ’ ವಂಶಸ್ಥರು
ಡಾ. ಶಿವಾನಂದ ಶಿವಾಚಾರ್ಯರು

ತುಮಕೂರು ೨೮ : “ಕನ್ನಡಿಗರದು ‘ಪುಣ್ಯಕೋಟಿ’ ಜಾಯಮಾನ.
ಕನ್ನಡಿಗರು ‘ಪುಣ್ಯಕೋಟಿ’ ಇದ್ದ ಹಾಗೆ. ನಮ್ಮೀ ವೀರಕನ್ನಡಿಗರು ಪುಣ್ಯಕೋಟಿ ಪರಂಪರೆಯ ಹರಿಕಾರರು. ಪುಣ್ಯಕೋಟಿ ನಮಗೆಲ್ಲ “ಹಿಂದೆ ಬಂದರೆ ಒದೆಯಬೇಡಿ.
ಮುಂದೆ ಬಂದರೆ ಹಾಯಬೇಡಿ” ಎಂದು ಪಾಠಮಾಡಿದೆ.
ಅಂದು ಆ ಪುಣ್ಯಕೋಟಿ ನಮಗೆ ಹೇಳಿಕೊಟ್ಟ ಪಾಠವನ್ನು
ನಾವು-ನೀವುಗಳೆಲ್ಲ ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದೇವೆ.

ನಾವು ಕನ್ನಡಿಗರು ಹಿಂದೆ ಬಂದವರಿಗೆ ಒದೆಯುವುದಿಲ್ಲ. ಮುಂದೆ ಬಂದವರಿಗೆ ಹಾಯುವುದಿಲ್ಲ. ನಮ್ಮ ಮೇಲೇರಿ ಬಂದರೆ ನಾವು ‘ಕಮಕ್’ ಎನ್ನುವುದಿಲ್ಲ.
ನಾವು ‘ಕಿಮಕ್’ ಎನ್ನುವುದಿಲ್ಲ. ನಮ್ಮ ಮೇಲೆ ಬೇರೆಯವರು ನುಗ್ಗಿಕೊಂಡು ಬಂದರೆ, ಮತ್ತವರು ನಮ್ಮ ನೆಲ-ಜಲಗಳನ್ನು ‘ಒತ್ತುವರಿ’ ಮಾಡಿಕೊಂಡಿದ್ದರೆ
ನಾವು ‘ಪುಕಾರು’ ಮಾಡುವುದಿಲ್ಲ ಮತ್ತು ನಾವು ‘ತಕರಾರು’ ಮಾಡುವುದಿಲ್ಲ.
ಏಕೆಂದರೆ ನಾವು ‘ಪುಣ್ಯಕೋಟಿ’ ವಂಶಸ್ಥರು.
ಇದು ಕಾರಣವಾಗಿ ನಮ್ಮ ನಾಡು, ನುಡಿ ಹಾಗೂ ನೆಲ-ಜಲಗಳು
ಧಾರಾಳವಾಗಿ ಒತ್ತುವರಿಗೆ ವಸ್ತುವಾಗಿವೆ ಮತ್ತು ಆಗುತ್ತಲಿವೆ”
ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯರು
ನಿನ್ನೆ ತುಮಕೂರಿನ ಮಂಡಿಪೇಟೆಯಲ್ಲಿ ಮಂಡಿಪೇಟೆ ಕನ್ನಡ ಯುವಕರ ಸಂಘ ಹಾಗೂ ಶ್ರಮಜೀವಿಗಳ ಸಂಘ ಸಂಯುಕ್ತವಾಗಿ ಏರ್ಪಡಿಸಿದ ವೈಭವದ ನಾಲ್ಕನೆಯ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.

ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ಬೆಳಗಾವಿ ಮತ್ತು ಇತರೇ ಗಡಿಪ್ರದೇಶಗಳಲ್ಲಿ
‘ನೆಲ’ ಒತ್ತುವರಿ ನಡೆದುಕೊಂಡಿದ್ದರೆ ಬೆಂಗಳೂರಿನಲ್ಲಿ ‘ನುಡಿ’ ಒತ್ತುವರಿ ನಡೆದುಕೊಂಡಿದೆ. ಇವತ್ತಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರು
ಸಿಕ್ಕರೆ ಸ್ವರ್ಗ ಸಿಕ್ಕಂತೆನಿಸುತ್ತದೆ. ಬೆಂಗಳೂರು ಪರಪ್ರದೇಶೀಯರ ಮತ್ತು ಪರಭಾಷಾದೌರ್ಜನ್ಯದ ಕೇಂದ್ರಬಿಂದುವಾಗಿದೆ.

ಅವತ್ತೊಂದು ದಿನ “ಮಿಲ್ಕಿ ಬ್ಯೂಟಿ” ಹಾಗೂ “ಸಿಲ್ಕ್ ಸಿಟಿ”ಯಂತಿದ್ದ
ಬೆಂಗಳೂರು ಈಗ ‘ಸಿಲಿಕಾನ್ ಸಿಟಿ’ಯಾಗಿಬಿಟ್ಟಿದೆ.
ಅಂದು ಆ ಬೋರೇಗೌಡ, ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಬಂದು ಖುಷಿಪಟ್ಟಿದ್ದ.
ಇಂದು ಆ ಬೋರೇಗೌಡರಿಗೆ ಮತ್ತು ಕೆಂಪೇಗೌಡರಿಗೇನೇ ಬೆಂಗಳೂರಲ್ಲಿ ಇರುವುದು ಕಷ್ಟವಾಗುತ್ತಿದೆ.
ಮೊನ್ನೆ ಅದಾರೋ ಒಬ್ಬ ಸಾಹಿತಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಕೂಡ ಬದಲಾಯಿಸಬಹುದು ಎಂದು ಸೂಚಿಸಿದುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮೊದಲು ಮಾಡಿಕೊಂಡು ನಾವೆಲ್ಲ ಕೇಳಿಸಿಕೊಂಡಿದ್ದೇವೆ.

ಅದೊಂದು ಕಾಲದಲ್ಲಿ ಸುಂದರವಾದ ಉಪವನದಂತಿದ್ದ ಮತ್ತು ಚೆಂದವಳ್ಳಿ ತೋಟದಂತಿದ್ದ ಬೆಂಗಳೂರು ಮಹಾನಗರ ಈಗ ತ್ಯಾಜ್ಯ, ವ್ಯಾಜ್ಯಗಳ ರಾಜಧಾನಿಯಾಗಿ ಪರಿಣಮಿಸಿದೆ.
ದಂತದ ಬೊಂಬೆಯಂತಿದ್ದ ಬೆಂಗಳೂರು ಮಹಾನಗರ ಇಂದು ಗೀಜಗನ ಗೂಡಾಗಿದೆ. ನಿಜಕ್ಕೂ ಅದರ ಪರಿಸ್ಥಿತಿ ನಂಜನುಂಡ ಆ ನಂಜುಂಡನಂತಾಗಿದೆ.
ಕನ್ನಡಿಗರು ಸ್ವಭಾವತಃ ಸಹಿಷ್ಣುಗಳು. ನಮ್ಮ ಕನ್ನಡಿಗರು
ಬರೀ ಪರಧರ್ಮ, ಪರಭಾಷಾ ಸಹಿಷ್ಣುಗಳಾಗಿದ್ದರೆ ಪರವಾ ಇಲ್ಲ.
ಅವರು ಅನ್ಯಜನದೌರ್ಜನ್ಯಸಹಿಷ್ಣುಗಳಾಗಿ ಇರುವುದು ಬೇಡ.

ನಾವು ಒಮ್ಮೆ ದೌರ್ಜನ್ಯಸಹಿಷ್ಣುಗಳೆಂದು ಬೇರೆಯವರಿಗೆ ಗೊತ್ತಾದರೆ ಸಾಕು,
ಅವರು ನಮ್ಮನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತಾರೆ,
 ಸಮುದ್ರವನ್ನೇ ಆಪೋಶಣ ಮಾಡಿದ ಆ ಅಗಸ್ತ್ಯ ಮಹರ್ಷಿಯಂತೆ.
ನಮ್ಮಲ್ಲಿನ ಸೌಜನ್ಯವದು ಇನ್ನೊಬ್ಬರಲ್ಲಿನ ದೌರ್ಜನ್ಯವು
ಇಮ್ಮಡಿ-ಮುಮ್ಮಡಿಗೊಳ್ಳುವುದಕ್ಕೆ ಅವಕಾಶ ಕೊಡುವುದು ಬೇಡ.

“ಹೋಗಲಿ ಬಿಡು, ಇರಲಿ ಬಿಡು” ಎಂಬ ಮಾತನ್ನು ಇದುವರೆಗೆ ಮಂತ್ರದೋಪಾಧಿಯಲ್ಲಿ ಉಚ್ಚರಿಸಿಕೊಂಡಿದ್ದುದೇ ನಮಗೀಗ ಮುಳ್ಳಾಗಿ ಪರಿಣಮಿಸಿದೆ. ಅದು ಕಾರಣವಾಗಿಯೇ ನಾವುಗಳು ಎಲ್ಲ ವಿಧದ ಒತ್ತುವರಿಗಳಿಗೂ ಒಳಪಡುವ ಹಾಗಾಗಿದೆ. ನಾವು ಈಗ, ಈ ಕ್ಷಣದಿಂದಲೇ ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಆಸ್ತಿ-ಪಾಸ್ತಿಗಳಷ್ಟೇ ಅಲ್ಲ, ನಮ್ಮಗಳ ಅಸ್ತಿತ್ವವೂ ಕೂಡ ಹೇಳಹೆಸರಿಲ್ಲದಂತಾಗುತ್ತದೆ. ನಾವೀಗ ಸಾಧುವಿಂಗೆ ಸಾಧುವಾಗಿ ಬಾಧಿಪರ ಪಾಲಿಗೆ ಬಾಧಿಪರಾಗಿ ನಿಂತುಕೊಳ್ಳಬೇಕಾಗಿದೆ. “ಶಠಂ ಪ್ರತಿ ಶಾಠ್ಯಮ್” ನೀತಿಯನ್ನು ಅನುಸರಿಸಬೇಕಾಗಿದೆ” ಎಂದು ಹೇಳಿದರು.

ಮಂಡಿಪೇಟೆಯ ಹಿರಿಯ ವರ್ತಕರಾದ ಶ್ರೀ ಸಿ. ಎ. ಸೋಮೇಶ್ವರ ಗುಪ್ತಾರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ತುಮಕೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಸೈಯದ್ ನಯಾಜ್ ಅಹಮದ್‌ರವರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಕೆ. ನಾರಾಯಣಮೂರ್ತಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಲಕ್ಷ್ಮಿನರಸಿಂಹಯ್ಯನವರು ಪ್ರಾರ್ಥನಾ ಗೀತೆಯನ್ನು ಹೇಳಿ ಸಮಾರಂಭದ ನಿರೂಪಣೆ ಮಾಡಿದರು. 
Good Evening On 28th November 2015

ನೆಲ ನೆಲವೆಂದು ಹೊಡೆದಾಡುವುದು “ಲ್ಯಾಂಡ್ ಮಾಫಿಯಾ’..!

ಕುಲ ಕುಲವೆಂದು ಹೊಡೆದಾಡುವುದು ‘ಕೋಮು ಮಾಫಿಯಾ’...!!!

- ಇದು ಕನಕದಾಸ ಉವಾಚ

ಡಾ. ಶ್ರೀ ಶಿವಾನಂದ ಶಿವಾಚಾರ್ಯರು ತುಮಕೂರು ೨೮ : “ಕನಕದಾಸರು ಸಾಮಾನ್ಯರಲ್ಲ. ಅವರು ಆ ದೇವರಿಗೇನೇ, ಸಾಕ್ಷಾತ್ ಆ ಕೃಷ್ಣಪರಮಾತ್ಮನಿಗೇನೇ ‘ರೈಟ್ ಟರ್ನ್’, ‘ಲೆಫ್ಟ್ ಟರ್ನ್’ ಹೇಳಿದ ಮಹಾನುಭಾವರು. ಉಡುಪಿಯ ಆ ಶ್ರೀಕೃಷ್ಣ ಕನಕದಾಸರ ಕರುಳಿನ ಕರೆಗೆ ಓಗೊಟ್ಟು, ಅವರ ಭಕ್ತಿಗೆ ಮನಸೋತು ಕನಕದಾಸರತ್ತಲೇ ತನ್ನನ್ನು ತಾನು ತಿರುಗಿಸಿಕೊಂಡು ದೇವಾಲಯದ ಹೊರಗಡೆ ನಿಂತುಕೊಡಿದ್ದ ಅವರಿಗೆ ದರ್ಶನ ನೀಡುತ್ತಾನೆ. ಸಾಮಾನ್ಯವಾಗಿ “ಭಕ್ತರು ಭಗವಂತನತ್ತ ಮುಖಮಾಡಬೇಕು” ಎಂದು ಹೇಳುವುದು ರೂಢಿಯಲ್ಲಿರುವ ಮಾತು. ಆದರೆ ಕನಕದಾಸರ ವಿಷಯದಲ್ಲಿ ಈ ಮಾತು ತಿರುವು-ಮುರುವು ಆಗಿದೆ. ಕನಕದಾಸರ ವಿಷಯದಲ್ಲಿ ಭಗವಂತನೇ ಅವರತ್ತ ಮುಖಮಾಡುತ್ತಾನೆ. ಇದೊಂದು ಬಹುದೊಡ್ಡ ಇತಿಹಾಸವೂ ಅಹುದು. ಇದೊಂದು ಬಹುದೊಡ್ಡ ಪವಾಡವೂ ಅಹುದು. ಕನಕದಾಸರದು ಅಸಾಧ್ಯವನ್ನು ಸಾಧಿಸಿದರು, ಅಸಂಭವವನ್ನು ಹೆತ್ತುಕೊಟ್ಟರು. ಅವರೊಂದು ಅದಮ್ಯ ಚೇತನ” ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯರು ನಿನ್ನೆ ಹಿರೇಮಠದಲ್ಲಿ ಕನಕದಾಸ ಜಯಂತಿಯ ನಿಮಿತ್ತ ವಿಶೇಷ ಉಪನ್ಯಾಸವನ್ನು ನೀಡುತ್ತ ಈ ಮೇಲಿನ ಮಾತುಗಳನ್ನು ಹೇಳಿದರು. ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ನೆಲ ನೆಲವೆಂದು ಹೊಡೆದಾಡುವುದು ‘ಲ್ಯಾಂಡ್ ಮಾಫಿಯಾ’ ಆದರೆ ಕುಲ ಕುಲವೆಂದು ಹೊಡೆದಾಡುವುದು “ಕೋಮು ಮಾಫಿಯಾ’!! ಇದು ನಮ್ಮ ಉವಾಚವಲ್ಲ. ಇದು ಅಪ್ಪಟ ಶ್ರೀ ಶ್ರೀ ಕನಕದಾಸ ಉವಾಚ. ಕನಕದಾಸರು ಕುಲ, ಕುಲೀನ, ಕುಲಜರ ಕುರಿತು ತಮ್ಮ ‘ಅಧಿಕೃತ’ ವಕ್ತವ್ಯವನ್ನು ದಾಖಲಿಸಿದ್ದಾರೆ. ಅವರ ದೃಷ್ಟಿಯಲ್ಲಿ, ಪಶುಸಂಗೋಪನೆಯ ಹಾಗೆ ‘ನಾನು’ (ಅಹಂ=ಇಗೋ) ಇದನ್ನು ‘ಸಂಗೋಪನೆ’ ಮಾಡಿಕೊಂಡಿರುವವರು ಕುಲಜರೂ ಅಲ್ಲ, ಅವರು ಕುಲೀನರೂ ಅಲ್ಲ. ಅವರ ಪ್ರಕಾರ “ನಾನು, ನನ್ನದು” ಎಂಬ ಈ ಮೋಹ-ವ್ಯಾಮೋಹವನ್ನು ಅಳಿದವರು, ಮತ್ತದನ್ನು ಸಂಹರಿಸಿದವರು ಕುಲಜರು ಮತ್ತು ಅವರು ಕುಲೀನರು. ಕನಕದಾಸರು ನಾದ-ವೇದಗಳ ಕೂಡಲಸಂಗಮ. ಅಷ್ಟು ಮಾತ್ರವಲ್ಲ, ಅವರು ಕನ್ನಡನಾಡಿನ ಭಕ್ತಿಕ್ರಾಂತಿಯ ಹರಿಕಾರರು ಕೂಡ ಅಹುದು. ಪುರಂದರದಾಸರು ಮತ್ತು ಕನಕದಾಸರು ಕನ್ನಡನಾಡಿನ ಭಕ್ತಿಸಾರಸ್ವತದ ಎರಡು ಕಣ್ಣುಗಳು. ಅವರಿಬ್ಬರೂ ನಮ್ಮ ಕನ್ನಡನಾಡಿನ ದಾಸಸಾಹಿತ್ಯದ ಸಯಾಮಿಗಳು!! ಕನಕದಾಸರು ಬರೀ ಭಕ್ತರಲ್ಲ; ಅವರು ಬರೀ ದಾಸರಲ್ಲ. ಅವರೊಂದು ಜ್ಞಾನ-ವಿಜ್ಞಾನ-ಸುಜ್ಞಾನಗಳ ಸಂಗಮಕ್ಷೇತ್ರ. ಅವರೊಂದು ‘ಬಹುಮುಖಿ’ ಪ್ರತಿಭಾಸಂಗಮ. ಕನಕದಾಸರು ಗೀತಕಾರ, ಗೀತರಚನಾಕಾರರೂ ಅಹುದು, ಅವರು ಸಂಗೀತಜ್ಞರೂ ಅಹುದು, ಅವರು ತತ್ತ್ವಜ್ಞಾನಿ, ದಾರ್ಶನಿಕರೂ ಅಹುದು. ಅವರು ಸಂತರೂ ಅಹುದು. ಅವರು ಸಮಾಜಸುಧಾರಕರೂ ಅಹುದು. ಅವರು ಶರಣರೂ ಅಹುದು.ಅವರು ಸಾತ್ತ್ವಿಕರೂ ಅಹುದು. ಒಟ್ಟಿನಲ್ಲಿ ನಮ್ಮ ದೃಷ್ಟಿಯಲ್ಲಿ ಕನಕದಾಸರೊಂದು ಭಕ್ತಿಯ ಸಜೀವ ರೂಪ ಮತ್ತು ಅವರೊಂದು ಭಕ್ತಿಯ ಪರಾಕಾಷ್ಠೆ. ಈ ದೇಶ ಕಂಡ ಒಂದು ಅಪರೂಪದ ವ್ಯಕ್ತಿತ್ವ ನಮ್ಮ ಕನಕದಾಸರು. ಇತ್ತೀಚಿನ ದಿನಗಳಲ್ಲಿ “ಕುಲ ಕುಲವೆಂದು ಹೊಡೆದಾಡಬೇಡಿ. ಕುಲ ಕುಲವೆಂದು ಹೊಡೆದಾಡಿ ಕುರುಕುಲವಾಗಬೇಡಿ” ಎಂದು ಹೇಳಿದ ಆ ಮಹಾನುಭಾವ, ಭಕ್ತಶಿರೋಮಣಿ ಕನಕದಾಸರನ್ನು ಮತ್ತೆ ಮತ್ತೆ ಒಂದೇ ಕುಲಕ್ಕೆ ಕಟ್ಟಿಹಾಕುವುದು ಅದಾವ ನ್ಯಾಯ? ಅದಾವ ನೀತಿ? ಅದು ನ್ಯಾಯವೂ ಅಲ್ಲ; ಅದು ನೀತಿಯೂ ಅಲ್ಲ. ಅದೊಂದು ರಾಜಕೀಯ ಮತ್ತು ಅದೊಂದು ರಾಜಕೀಯದ ಚದುರಂಗದಾಟ ಅಷ್ಟೇ. ವಾಲ್ಮೀಕಿ, ಬಸವಣ್ಣ, ಮಹಾವೀರ, ಅಂಬೇಡ್ಕರ್ ಇವರೆಲ್ಲರ ಹಾಗೆ ಕನಕದಾಸರೂ ಕೂಡ ನಮ್ಮ ಜಾತಿ ರಾಜಕೀಯ ಚದುರಂಗದ ದಾಳವಾಗುತ್ತಿದ್ದಾರೆ, ಅಷ್ಟೇ” ಎಂದು ಹೇಳಿದರು. ಉಪನ್ಯಾಸಕ್ಕೆ ಮೊದಲು ಶ್ರೀಮಠದ ವಿದ್ಯಾರ್ಥಿಗಳು ಮತ್ತು ಶ್ರೀಮಠದ ಭಕ್ತರು ಸಾಂಕೇತಿಕವಾಗಿ ಕನಕದಾಸರ ಭಾವಚಿತ್ರದೆದುರಿನಲ್ಲಿ ದೀಪ ಬೆಳಗಿಸಿ ಕನಕದಾಸರ ಭಾವಚಿತ್ರ ಮೇಲೆ ಹೂಮಳೆ, ಪುಷ್ಪವೃಷ್ಟಿಗರೆದರು.

Wednesday, November 18, 2015

Swamiji Sayings 2


೨೦೧೫, ಆಗಸ್ಟ್ ೧೪
ವಚನಾಂತರಂಗ

ಉಂಡರೆ ಭೂತನೆಂಬರು, ಉಣದಿರ್ದಡೆ ಚಕೋರಿ ಎಂಬರು
ಊರೊಳಗಿರ್ದಡೆ ಸಂಸಾರಿ ಎಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು
ಮಾತನಾಡಿದರೆ ಪಾಪಕರ್ಮಿ ಎಂಬರು, ಮಾತನಾಡದಿರ್ದಡೆ ಮುಸುಕಕರ್ಮಿ ಎಂಬರು
ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿ ಎಂಬರು 
ಇಂತೀ ವಸುಧೆಯೊಳಗೆ ಎಂಟು ವಿಧವ ಕಳೆಯಲಳವಲ್ಲ ಕಾಣಾ ಕಲಿದೇವರ ದೇವಾ. 
ಇದು ಮಡಿವಾಳ ಮಾಚಿದೇವರ ವಚನ. ಹನ್ನೆರಡನೆಯ ಶತಮಾನದ ಪ್ರಮುಖ ಶರಣರಲ್ಲಿ ಮಾಚಿದೇವರು ಕೂಡ ಒಬ್ಬರು. ಮಾಚಿದೇವರು ಧೈರ್ಯ, ಸ್ಥೆರ್ಯ, ಸಾಹಸಗಳ ಮೂರ್ತರೂಪ. ಸಮಯ, ಸಂದರ್ಭ, ಸನ್ನಿವೇಶಗಳಿಗೆ ಎದೆಕೊಟ್ಟು ನಿಲ್ಲುವ ತಾಕತ್ತು ಅವರಲ್ಲಿತ್ತು. ಮಾಚಿದೇವರದು ‘ಜನಪರ’ ಮತ್ತು ‘ಹೋರಾಟಪರ’ ಮನಸ್ಸು.
ಅಣ್ಣ ಬಸವಣ್ಣ, ಚೆನ್ನಬಸವಣ್ಣ ಇವರುಗಳ ಹಾಗೆ ಮಾಚಿದೇವರು ತುಂಬ ಸೌಮ್ಯ ಅಲ್ಲ. 
ಅವರೊಂದಷ್ಟು “ಟಫ್ & ಹಾರ್ಡ್”. ಅವರ ಮಾತು ಮತ್ತು ಮನಸ್ಸು - ಎರಡೂ ಗಟ್ಟಿ.
 ತಮಗೇನು ಹೇಳಬೇಕಿದೆಯೋ ಮತ್ತು ಹೇಳಬೇಕೆಂದಿದೆಯೋ ಅದನ್ನವರು 
ನೇರವಾಗಿ ಮತ್ತು ಒಂದಷ್ಟು ಖಾರವಾಗಿಯೇ ಹೇಳುತ್ತಾರೆ. 
ಬಸವಣ್ಣನವರ ಹಾಗೆ ಎಲ್ಲದಕ್ಕೂ ತಲೆಬಾಗಿಕೊಂಡು ಮತ್ತು 
‘ಕೈ’ ಮುಗಿದುಕೊಂಡಿರುವ ‘ಕಾಂಪ್ರೊಮೈಜ್’ ಮಾದರಿಯ ಸ್ವಭಾವ ಅವರದಲ್ಲ. 
ಮಾಚಿದೇವರದು ಒಂದು ತೆರನಾದ “ನೋ ಕಾಂಪ್ರೊಮೈಜ್” ಮತ್ತು “ಫುಲ್ ಕಮಿಟ್‌ಮೆಂಟ್” ಸ್ವಭಾವ. ಶರಣಸಮುದಾಯದ ಮಧ್ಯದಲ್ಲಿ ಅವರಿಗೆ ‘ಯೋಧ’ (ಜೈ ಜವಾನ್) ‘ಇಮೇಜ್’ ಇತ್ತು.
 ಮಾಚಿದೇವರಲ್ಲಿ ‘ಪ್ರವಾಹದ ವಿರುದ್ಧ’ ಮತ್ತು ‘ಪ್ರಭಾವದ ವಿರುದ್ಧ’ ಈಜುವ ಛಲವೂ ಇತ್ತು, ಬಲವೂ ಇತ್ತು.
 ಇದು ಕಾರಣವಾಗಿ ಅವರು ಶರಣಕ್ರಾಂತಿಯ ಮುಂಚೂಣಿಯಲ್ಲಿ ನಿಲ್ಲುವುದಕ್ಕೆ ಸಾಧ್ಯವಾಯಿತು. 
ಪ್ರಸ್ತುತ ವಚನದಲ್ಲಿ ಮಾಚಿದೇವರು ‘ಜನಗಳು’ ಮತ್ತು ‘ಜನಾಭಿಪ್ರಾಯ’ - ಈ ಕುರಿತು ತಮ್ಮ ಅಧಿಕೃತ ವಕ್ತವ್ಯವನ್ನು ದಾಖಲಿಸಿದ್ದಾರೆ. “ಜನರು ಹೇಗಿದ್ದರೂ ಅಂತಾರೆ, ಆಡಿಕೊಳ್ಳುತ್ತಾರೆ” ಎಂಬುವುದು ಇಲ್ಲಿನ ತಾತ್ಪರ್ಯ. ಜನಗಳಿಂದ ಏನನ್ನೂ ಅನ್ನಿಸಿಕೊಳ್ಳಬಾರದೆಂದು ನಾವುಗಳು ಅದೆಷ್ಟೇ “ದೂಧ್ ಕಾ ಧುಲಾ ಹುವಾ” ಆಗಿ ವರ್ತಿಸಿಕೊಂಡಿದ್ದರೂ ಜನಗಳು, ಏನಾದರೂ ‘ಐಬು’ ತೋರಿಸಿಬಿಟ್ಟು ನಮ್ಮನ್ನು ಅನ್ನುವುದನ್ನು ಮತ್ತು ಆಡಿಕೊಳ್ಳುವುದನ್ನು ಬಿಡುವುದಿಲ್ಲ. ಜನಾಭಿಪ್ರಾಯವನ್ನು ಯಾವಾಗಲೂ ಪರವಾಗಿರಿಸಿಕೊಂಡಿರುವುದು ಸಾಧ್ಯವೇ ಇಲ್ಲ. ಬರೀ ಮನುಷ್ಯಮಾತ್ರರಿಗೆ ಮಾತ್ರವಲ್ಲ, 
ಆ ಹರಿಹರಬ್ರಹ್ಮಾದಿಗಳಿಗೂ ಕೂಡ ಜನಾಭಿಪ್ರಾಯವನ್ನು ನಿರಂತರವಾಗಿ ಅವರ ಪರವಾಗಿರಿಸಿಕೊಂಡಿರುವುದು ಸಾಧ್ಯವಿಲ್ಲ.  ಅದು ಹೇಗಾದರೂ ಮಾಡಿ, ‘ಶತಾಯ ಗತಾಯ’ ಪ್ರಯತ್ನಮಾಡಿ, ಹೋರಾಡಿ, ಕಷ್ಟಪಟ್ಟಾದರೂ ಸರಿ, ನಾಯಿಯ ಬಾಲವನ್ನು ಕೆಲಕಾಲದ ಮಟ್ಟಿಗಾದರೂ ನೇರವಾಗಿಸಿಕೊಂಡಿರಬಹುದು. ಆದರೆ ಜನಾಭಿಪ್ರಾಯವನ್ನು ಯಾವಾಗಲೂ ಪರವಾಗಿರಿಸಿಕೊಂಡಿರುವುದು ಅಸಾಧ್ಯದ ಮಾತು. ಊಸರವಳ್ಳಿ ಬಣ್ಣ ಬದಲಾಯಿಸುವ ಹಾಗೆ ‘ಜನಾಭಿಪ್ರಾಯ’ ಆಗಾಗ್ಗೆ 
ತನ್ನ ಅಭಿಪ್ರಾಯ ಮತ್ತು ಅಭಿಮತವನ್ನು ಬದಲಾಯಿಸುತ್ತಲೇ ಇರುತ್ತದೆ. ಜನರನ್ನು ತಿದ್ದುವುದು, ಮತ್ತವರನ್ನು ಸಮಾಧಾನಪಡಿಸುವುದು ಮತ್ತು ಅವರ ಅಭಿಪ್ರಾಯವನ್ನು ಪರವಾಗಿರಿಸಿಕೊಳ್ಳುವುದು ಎಂದೂ ಮತ್ತು ಯಾವ ಕಾಲಕ್ಕೂ ಆಗದ ಮಾತು ಮತ್ತು ಅದು ಸಾಧ್ಯವೇ ಇಲ್ಲ. 
ಜನಗಳ ಮನೋಭಾವ ಮತ್ತು ಮನಸ್ಥಿತಿಯನ್ನು ವಿಶ್ಲೇಷಿಸುತ್ತ ಮಾಚಿದೇವರು ಹೇಳುತ್ತಾರೆ,
ಉಂಡರೆ ಭೂತನೆಂಬರು, ಉಣದಿರ್ದಡೆ ಚಕೋರಿ ಎಂಬರು.....
ಊಟಮಾಡುವಾಗ ಒಂದಷ್ಟು ಜಾಸ್ತಿ ಉಂಡರೆ ‘ಭೂತ’ ಎಂದು ಕರೆದು ಭೂತದ ‘ಪಟ್ಟ’ ಕಟ್ಟುತ್ತಾರೆ. 
“ನೋಡು, ದೆವ್ವ ತಿಂದಂಗೆ ತಿಂತಾನೆ” ಅಂತಾರೆ. ಒಂದಷ್ಟು ಜಾಸ್ತಿ ಊಟಮಾಡುವ ಮನುಷ್ಯನಿಗೆ ಭೀಮ, ಬಕಾಸುರ, ವೃಕೋದರ ಎಂದು ಕರೆದು ಹಿಂಸೆ ಮಾಡುತ್ತಾರೆ. ಇನ್ನು ಊಟಮಾಡದೆ ಇರುವವರನ್ನು ಅಥವಾ ತುಂಬ ಕಡಿಮೆ ಊಟ ಮಾಡುವವರನ್ನಾದರೂ ಬಿಡುತ್ತಾರೆಯೇ? ಇಲ್ಲ, ಆತ\ಆಕೆಗೂ ಸಹ ‘ಚಕೋರ’, ‘ಚಕೋರಿ’ ಎಂದು ಕರೆದು ಅವರನ್ನು ಗೇಲಿಮಾಡುತ್ತಾರೆ. ಚಕೋರಪಕ್ಷಿ ಇದು, ಕೇವಲ ಬೆಳದಿಂಗಳಿನಿಂದ ಮತ್ತು ಬೆಳದಿಂಗಳನ್ನುಂಡುಕೊಂಡೇ ಬದುಕುವ ಪಕ್ಷಿ. ಚಕೋರವನ್ನು ‘ಜೊನ್ನಹಕ್ಕಿ’, ‘ಜೊನ್ನವಕ್ಕಿ’ ಎಂದು ಕೂಡ ಕರೆಯುತ್ತಾರೆ. 
“ರವಿ ಕಾಣದ್ದನ್ನು ಕವಿ ಕಾಣುವ” ಕವಿಸಾಮ್ರಾಜ್ಯದ ಕವಿಸಮಯದಲ್ಲಿ ಚಾತಕಪಕ್ಷಿಯು ಮಳೆಹನಿಯನ್ನು ಕುಡಿದು ಜೀವಿಸಿಕೊಂಡಿದ್ದರೆ ಚಕೋರಪಕ್ಷಿಯು ಬೆಳದಿಂಗಳನ್ನೇ ಆಹಾರವಾಗಿಸಿಕೊಂಡು ಅದನ್ನೇ ಸೇವಿಸಿಕೊಂಡು ಬದುಕಿರುತ್ತದೆ. ಬಸವಣ್ಣನವರು ಕೂಡ ತಮ್ಮೊಂದು ವಚನದಲ್ಲಿ “ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕೆ ಭಾನುವಿನ ಉದಯದ ಚಿಂತೆ” ಎಂದು ಹೇಳಿರುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಜನಗಳು ಉಂಡರೆ ‘ಭೂತ’ ಎಂದು ಗೇಲಿಮಾಡುತ್ತಾರೆ; ಉಣ್ಣದೆ ಇದ್ದರೆ ‘ಚಕೋರ’ ಎಂದು ಗೇಲಿಮಾಡುತ್ತಾರೆ. ಉಂಡರೆ ‘ಭೋಗಿ’ ಅಂತಾರೆ, ಉಣದಿದ್ದರೆ ‘ರೋಗಿ’ ಅಂತಾರೆ. ಹೇಗಿದ್ದರೂ ಜನ ಒಂದಂತಾರೆ, ಒಂದಾಡುತ್ತಾರೆ. ಜನಗಳನ್ನು ಮೆಚ್ಚಿಸುವುದು ಸಾಧ್ಯವೇ ಇಲ್ಲ. 
ಊರೊಳಗಿರ್ದಡೆ ಸಂಸಾರಿ ಎಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು....
ಊರಿನಲ್ಲಿದ್ದರೆ ಜನರು ‘ಮನೆಹಾಳ’ ಎನ್ನುತ್ತಾರೆ. ಊರು ಬಿಟ್ಟು ಕಾಡಿಗೆ ಹೊರಟುಹೋದರೆ ಮಂಗ, ಕೋತಿ, ಮರ್ಕಟ ಅಂತಾರೆ. ಊರಲ್ಲಿದ್ದರೂ ಅಂತಾರೆ, ಕಾಡಲ್ಲಿದ್ದರೂ ಅಂತಾರೆ. ಊರಲ್ಲಿದ್ದು ಹೆಂಡತಿ, ಮಕ್ಕಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದರೆ ಮೋಹ-ವ್ಯಾಮೋಹಗಳ ನೊಗವನ್ನು ಹೆಗಲ ಮೇಲಿಟ್ಟು ‘ಸಂಸಾರಿ’ ಎಂದು ಕರೆದು ಹೀಗಳೆಯುತ್ತಾರೆ.  “ಊರಲ್ಲಿರುವುದು ಬೇಡ; ಸಂಸಾರ ಬೇಡವೇ ಬೇಡ” ಎಂದು ಕಾಡಿಗೆ ಹೋದರೆ ಆ ಕುರಿತು ಕೂಡ ಜನಗಳು ಅನ್ನದೆ ಬಿಡುವುದಿಲ್ಲ. ಕಾಡಿಗೆ ಹೋದರೆ ‘ಪರಾರಿ’ ಮತ್ತು ‘ಪಲಾಯನವಾದಿ’ಯ ಪಟ್ಟ ಕಟ್ಟಿ ಹಿಂಸಿಸುತ್ತಾರೆ. ಅಷ್ಟು ಮಾತ್ರವಲ್ಲ, “ನಿಜಕ್ಕೂ ಆತ ಕಾಡಿನಲ್ಲಿ ಇರಬೇಕಾದವನೇ! ಅಪ್ಪಿತಪ್ಪಿ ಊರೊಳಗೆ ಬಂದಿದ್ದಾನೆ. ಜನಗಳ ಮಧ್ಯದಲ್ಲಿ ಇದ್ದುಕೊಂಡು ಬಾಳುವೆ ಮಾಡುವುದು ಅಂದರೆ ಅದು ಹೇಗೆ ಆತನಿಗೆ ರುಚಿಸೀತು? ಕಾಡಿನಲ್ಲಿದ್ದು ಮಂಗನ ಹಾಗೆ ಕೊಂಬೆಯಿಂದ ಕೊಂಬೆಗೆ ಹಾರಿಕೊಂಡಿರುವುದೇ ಆತನಿಗೆ ಚೆಂದ” ಎಂದು ನಿರರ್ಗಳವಾಗಿ ತಮ್ಮೊಡಲಾಳದ ಕಹಿಯನ್ನೆಲ್ಲ ಹೊರಹಾಕುತ್ತಾರೆ.
ಜನಗಳು ಅಂದುಕೊಳ್ಳುತ್ತಾರೆ, ಆಡಿಕೊಳ್ಳುತ್ತಾರೆ ಎಂದು ಶ್ರೀರಾಮಚಂದ್ರ ತನ್ನ ಪ್ರಿಯಪತ್ನಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಲಿಲ್ಲವೇ? ಅನ್ನುವುದಕ್ಕೆ, ಆಡುವುದಕ್ಕೆ ನಮ್ಮ ಜನಗಳಿಗೆ ಇಂದ್ರನಾದರೇನು, 
ಚಂದ್ರನಾದರೇನು, ಹರಿಶ್ಚಂದ್ರನಾದರೇನು, ರಾಮಚಂದ್ರನಾದರೇನು?
 ಜನಾಭಿಪ್ರಾಯವಿದು ಅಯೋಧ್ಯೆಯ ಅಗಸನಂತೆ!! ಅದು ರಾಮನನ್ನೂ ಬಿಡುವುದಿಲ್ಲ, ರಹೀಮನನ್ನು ಬಿಡುವುದಿಲ್ಲ!!
ಮಾತನಾಡಿದರೆ ‘ಪಾಪಕರ್ಮಿ’ ಎಂಬರು, ಮಾತನಾಡದಿರ್ದಡೆ ‘ಮುಸುಕಕರ್ಮಿ’ ಎಂಬರು
ಈ ಪ್ರಪಂಚದಲ್ಲಿ ಮಾತನಾಡಿಕೊಂಡಿದ್ದರೂ ಕಷ್ಟ; ಮಾತನಾಡದೆ ಹಾಗೆಯೇ ಸುಮ್ಮನೇ ಬಾಯಿ ಮುಚ್ಚಿಕೊಂಡಿದ್ದರೂ ಕಷ್ಟ. ಜನಗಳು ಮಾತನಾಡಿದರೂ ಅಂತಾರೆ, ಮಾತನಾಡದಿದ್ದರೂ ಅಂತಾರೆ. ಎಲ್ಲರ ಜೊತೆಯಲ್ಲಿ ಬೆರೆತು ‘ಹಾಯ್’, ‘ಬಾಯ್’ ಎಂದು ಮಾತನಾಡಿಕೊಂಡಿದ್ದರೆ, “ಅತಿಯಾಗಿ ಮಾತನಾಡ್ತಾನೆ, ೨೪ ಗಂಟೆ ಕಾಲ, “೨೪ಘಿ೭” ಮಾದರಿಯಲ್ಲಿ ಮಾತಾಡ್ತಾನೇ ಇರ‍್ತಾನೆ. ಪಾಪಿ, ಮಾತಾಡಿ ಮಾತಾಡಿಯೇ ನಮ್ಮನ್ನೆಲ್ಲ ಸಾಯಿಸಿಬಿಡ್ತಾನೆ. ಆ ದೇವರು ಎಲುಬಿಲ್ಲದ ನಾಲಿಗೆ ಕೊಟ್ಟಿದ್ದಾನೆ ಎಂದು ಸರಿಹೋಗಿದೆ. ಆ ದೇವರೇನಾದರೂ ಕಟ್ಟಿಗೆಯ ನಾಲಿಗೆ ಅಥವಾ ಎಲುಬು ಇರುವ ನಾಲಿಗೆ ಕೊಟ್ಟಿದ್ದರೆ ನಾಲಿಗೆಯೆಲ್ಲ ಸವೆದುಹೋಗಿರುತ್ತಿತ್ತು” ಎಂದು ಆಡಿಕೊಳ್ಳುತ್ತಾರೆ. 
ಗಳಿಬಿಳಿಯಾಗಿ ಎಲ್ಲರೊಂದಿಗೂ ಮಾತನಾಡಿಕೊಂಡಿರುವವನಿಗೆ ಪಾಪಿಯ ‘ಪಟ್ಟ’ ಕಟ್ಟುತ್ತಾರೆ. ಇನ್ನು ಯಾರೊಂದಿಗೂ ಮಾತನಾಡದೆ ಸುಮ್ಮನಿದ್ದರೆ ಅದಕ್ಕೂ ಒಂದು ಅಂತಾರೆ. ಮಾತನಾಡದೆ ಇದ್ದರೆ ‘ಮುಸುಕರ್ಮಿ’ ಅಥವಾ ‘ಮುಸುಕಕರ್ಮಿ’ ಎನ್ನುತ್ತಾರೆ. ‘ಮುಸುಕರ್ಮಿ’ ಅಥವಾ ‘ಮುಸುಕಕರ್ಮಿ’ ಎಂದರೆ “ಗುಮ್ಮನಗುಸಕ” ಎಂದರ್ಥ. “ಗುಮ್ಮನಗುಸಕ” ಎಂಬ ಪದವಿದು ಉತ್ತರ ಕರ್ನಾಟಕದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ‘ಗುಮ್ಮನಗುಸಕ’ ಎಂದರೆ “ಹೊರಗ್ಹೋರಗೆ ಏನನ್ನೂ ಮಾಡನಾಡದೆ ಮತ್ತು ಏನನ್ನೂ ತೋರ್ಪಡಿಸಿಕೊಳ್ಳದೆ ಒಳಗೊಳಗೇನೇ ಚೆನ್ನಾಗಿ “ಗಾಳಹಾಕಿಬಿಟ್ಟು” ಕೆಲಸ, ಕಾರ್ಯವನ್ನು ತನ್ನ ಪರವಾಗಿಸಿಕೊಳ್ಳುವವನು” ಎಂದರ್ಥ. ಮಾತನಾಡಿಕೊಂಡಿದ್ದರೆ ಜನಗಳು ವಾಚಾಳಿ, ಬಜಾರಿ, ಮಾತಿನಮಲ್ಲ” ಎನ್ನುತ್ತಾರೆ. “ಮಾತನಾಡುವುದು ಬೇಡ” ಎಂದು ಸುಮ್ಮನಿದ್ದರೆ, “ನೋಡು, ಏನೂ ಮಾತನಾಡದೆ ಅದು ಹೇಗೆ ಗುಮ್ಮನಗುಸುಕನ ಹಾಗೆ ಸುಮ್ಮನಿದ್ದಾನೆ? ಮಾತೇ ಬರುವುದಿಲ್ಲ, ಪಾಪ, ಕೂಸು..!!” ಎಂದು ತಮಾಷೆಮಾಡುತ್ತಾರೆ. 
ಈ ಪ್ರಪಂಚದಲ್ಲಿ ಮಾತನಾಡಿದರೂ ತಪ್ಪು; ಮಾತನಾಡದಿದ್ದರೂ ತಪ್ಪು!! 
ಮಾತನಾಡದಿದ್ದರೆ ಮೌನಗೌರಿ, ಮಾತನಾಡಿದರೆ ಬಡ್ಡಿಬಂಗಾರಮ್ಮ!! 
ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿ ಎಂಬರು... 
“ಹೇಗಿದ್ದರೂ ಸಹ ಜನಗಳು ಒಂದಲ್ಲ ಒಂದು ಅಂತಾರೆ. ಏನೂ ಬೇಡ. ಯಾರ ಸಹವಾಸಾನೂ ಬೇಡ, ಉಪದ್ರವಾನೂ ಬೇಡ” ಎಂದು ಮನೆಯಲ್ಲಿ ಮುಸುಗಿಕ್ಕಿ ಮಲಗಿಕೊಂಡರೆ ಜನಗಳು ಆಗಲೂ ಸಹ ಬಿಡುವುದಿಲ್ಲ. ಮುಸುಗಿಕ್ಕಿ ಮಲಗಿಕೊಂಡರೆ ಜನಗಳು, ‘ಜಡದೇಹಿ, ಸೋಂಬೇರಿ, ಜಡಭರತ” ಎಂದು ಹಳಿಯುತ್ತಾರೆ. “ಮಲಗಿಕೊಂಡಿದ್ದರೆ ಬಯ್ಯುತ್ತಾರೆ” ಎಂದು ಎಚ್ಚತ್ತುಕೊಂಡಿದ್ದರೆ ಆಗ, “ಕಳ್ಳ, ಚೋರ, ನಿಶಾಚರ” ಎಂದು ಕರೆದು ‘ಚಾರಿತ್ರ್ಯವಧೆ’ ಮಾಡುತ್ತಾರೆ. 
ಎಚ್ಚರಿದ್ದರೆ ‘ಚೋರ್’, ಮಲಗಿಕೊಂಡಿದ್ದರೆ ‘ಕಾಮ್‌ಚೋರ್’!! 
ಏನಿದ್ದರೂ ಜನಕ್ಕೆ ಸಂತೋಷವಿಲ್ಲ, ಸಮಾಧಾನವಿಲ್ಲ. ಹೇಗಿದ್ದರೂ ಸಹ ಜನ ಅಂದುಕೊಳ್ಳುವುದನ್ನು, ಆಡಿಕೊಳ್ಳುವುದನ್ನು  ಬಿಡುವುದಿಲ್ಲ. ಬಹುತೇಕ ಜನಗಳು ಮತ್ತೊಬ್ಬರನ್ನು ಅಂದುಕೊಳ್ಳುವುದರಲ್ಲಿ 
ಮತ್ತು ಆಡಿಕೊಳ್ಳುವುದರಲ್ಲಿಯೇ ತಮ್ಮ ಅತ್ಯಮೂಲ್ಯ ಸಮಯವನ್ನು ಕಳೆದುಹಾಕುತ್ತಾರೆ. ಲೋಕಾಭಿಪ್ರಾಯವನ್ನು ಏಕಮೇವವಾಗಿಸಿಕೊಂಡು ಅದನ್ನು ಆಳಿಕೊಂಡಿರುವುದು ಮತ್ತು ಅದನ್ನು ಏಕೈಕಗೊಳಿಸಿಕೊಂಡಿರುವುದು
 ಆ ಲೋಕೇಶ್ವರನಿಗೂ ಕೂಡ ಸಾಧ್ಯವಿಲ್ಲ. ಏಕೆಂದರೆ “ಪಿಂಡೇ ಪಿಂಡೇ ಮತಿರ್ಭಿನ್ನಃ!! 
ಇಂತೀ ವಸುಧೆಯೊಳಗೆ ಎಂಟು ವಿಧವ ಕಳೆಯಲಳವಲ್ಲ ಕಾಣಾ ಕಲಿದೇವರ ದೇವ!! 
ಈ ಪ್ರಪಂಚದಲ್ಲಿ, ನಮ್ಮೀ ಈ ಧರಣಿ ಮಂಡಲ ಮಧ್ಯದೊಳಗೆ ಜನಗಳು ಸಕಾರಾತ್ಮಕವಾಗಿದ್ದರೂ ಅಂತಾರೆ, ಆಡ್ತಾರೆ; ನಕಾರಾತ್ಮಕವಾಗಿದ್ದರೂ ಅಂತಾರೆ, ಆಡ್ತಾರೆ. ಪ್ರಸ್ತುತ ವಚನದಲ್ಲಿ ಮಡಿವಾಳ ಮಾಚಿದೇವರು ‘ಸಕಾರಾತ್ಮಕ’ ಮತ್ತು ‘ನಕಾರಾತ್ಮಕ’ ನಾಲ್ಕ್ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿಬಿಟ್ಟು ಈ ಎಂಟು ಪ್ರಕಾರಗಳಲ್ಲಿ ಹೇಗಿದ್ದರೂ ಜನ ಅಂತಾರೆ, ಆಡಿಕೊಳ್ತಾರೆ. ಜನರು ಅನ್ನೋದನ್ನು, ಆಡೋದನ್ನು ತಪ್ಪಿಸಲು ಸಾಧ್ಯವಿಲ್ಲ. ಜನರನ್ನು ಮೆಚ್ಚಿಸುವುದಂತೂ ಯಾರಿಂದಲೂ  ಸಾಧ್ಯವಿಲ್ಲ” ಎಂಬ ತೀರ್ಪು ನೀಡಿದ್ದಾರೆ. 
ಮಾಚಿದೇವರು ಇಲ್ಲಿ ಬರೀ ಎಂಟು ಅಂಶಗಳ ‘ಪ್ರಸ್ತಾಪ’ ಮತ್ತು ‘ಪಟ್ಟಿ’ ಮಾತ್ರ ಮಾಡಿದ್ದಾರೆ. 
ಭೂಮಂಡಲದಲ್ಲಿ ಇಂಥ ನೂರಾರು, ಸಾವಿರಾರು ಅಂಶಗಳಿವೆ. 
ಜನಗಳು ಎಲ್ಲವನ್ನೂ ಒಪ್ಪಿ ‘ಸೈ’ ಎನ್ನುವಂಥ ಮತ್ತು ‘ಜೈ’ ಎನ್ನುವಂಥ ಮಾತಾಗಲಿ, ವ್ಯಕ್ತಿಯಾಗಲಿ, ವ್ಯಕ್ತಿತ್ವವಾಗಲಿ 
ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಅದಕ್ಕೋಸ್ಕರ ನಿಜವಾದ ಬುದ್ಧಿವಂತ ಮನುಷ್ಯ ಜನಮೆಚ್ಚುಗೆಯ ಹಿಂದೆ ಬೀಳದೆ ಮನ ಮೆಚ್ಚುವಂತೆ ನಡೆದುಕೊಂಡಿದ್ದರೆ ಸಾಕು. “ಜನಮೆಚ್ಚುಗೆಗಿಂತ ಮನಮೆಚ್ಚುಗೆ ತುಂಬ ಮುಖ್ಯ”. 
ಜನ ಮೆಚ್ಚದೆ ಇದ್ದರೂ ಮನ ಮೆಚ್ಚುವಂತೆ ನಡೆದುಕೊಂಡರೆ ಸಾಕು. ಮನ ಮೆಚ್ಚುವಂತೆ ನಡೆದುಕೊಂಡರೆ 
ಆ ದೇವರು, ಪರಾತ್ಪರ ಆ ಬ್ರಹ್ಮ ಕೂಡ ಮೆಚ್ಚಿಕೊಂಡು ‘ಭಲೇ, ಭೇಷ್’ ಹೇಳುತ್ತಾನೆ.
೧೨ನೇ ಶತಮಾನದ ಇನ್ನೋರ್ವ ಖ್ಯಾತ ವಚನಕಾರರಾದ ಅಂಬಿಗರ ಚೌಡಯ್ಯನವರ ವಚನವೊಂದು 
ಮಡಿವಾಳ ಮಾಚಿದೇವರ ಈ ವಚನದ ಹಾಗೇನೇ ಮತ್ತು ಅದೇ ಧಾಟಿಯಲ್ಲಿಯೇ ಇದೆ. 
ಹಾಗೇ ಸುಮ್ಮನೇ ಅದನ್ನು ಜಿಜ್ಞಾಸು-ವಾಚಕರ ಗಮನಕ್ಕೆ ತರುತ್ತಲಿದ್ದೇವೆ. 
ಅಂಬಿಗರ ಚೌಡಯ್ಯನವರ ವಚನ
ಉಂಡರೆ ಭೂತನೆಂಬರು, ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು.
ಊರೊಳಗಿದ್ದರೆ ಸಂಸಾರಿ ಎಂಬರು, ಅಡವಿಯೊಳಗಿದ್ದರೆ ಮೃಗಜಾತಿ ಎಂಬರು.
ನಿದ್ರೆಗೈದರೆ ಜಡದೇಹಿ ಎಂಬರು, ಎದ್ದಿದ್ದರೆ ಚೋರನೆಂಬರು (ಜಾರ)
ಇಂತೀ ಜನಮೆಚ್ಚಿ ನಡೆದವರ 
ಎಡದ ಪಾದ ಕಿರುಗುಣಿಯಲ್ಲಿ ಮನೆಮಾಡು, ಮನೆಮಾಡು
ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಡಾ. ಶ್ರೀ ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು 

ಶ್ರೀ ಶ್ರೀ‍ ಉವಾಚ - Swamiji Sayings - 01




ವಚನಾಂತರಂಗ - Vachanantaranga

1. ವಚನಾಂತರಂಗ

ಗಂಗಾ ನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ?

ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ?

ಸುರಭಿ ಮನೆಯಲ್ಲಿ ಕರೆವುತ್ತಿರೆ, ಹರಿವರೆ ಸೊಣಗನ ಹಾಲಿಂಗೆ?

ಬಯಸಿದಮೃತವಿದ್ದಂತೆ, ಅಂಬಿಲವ ನೆರೆದುಂಬ ಭ್ರಮಿತ ಮಾನವಾ, ನೀನು ಕೇಳಾ!

ಪರಮಪದವಿಯನೀವ ಚೆನ್ನ ಸೊಡ್ಡಳನಿದ್ದಂತೆ, ಸಾವದೇವರ ನೋಂತರೆ, ಕಾವುದೆ ನಿನ್ನ? 


ಇದು ಬಸವಣ್ಣನವರ ಸಮಕಾಲೀನರಾದ ಸೊಡ್ಡಳ ಬಾಚರಸರ ವಚನ. ``ಸೊಡ್ಡಳ'' ಅಥವಾ ``ಮಹಾದಾನಿ ಸೊಡ್ಡಳ'' - ಇದು ಬಾಚರಸರ ವಚನಾಂಕಿತ. ಬಾಚರಸರು ಬಿಜ್ಜಳನ ಅರಮನೆಯಲ್ಲಿ `ಕರಣಿಕ' ವೃತ್ತಿಯನ್ನು ಮಾಡಿಕೊಂಡಿದ್ದರು. ``ಕರಣಿಕ'' ಅಂದರೆ ಲೆಕ್ಕ ಬರೆಯುವವನು ಎಂದರ್ಥ. ಆ ಕಾಲದ ``ಕರಣಿಕ'' ಎಂದರೆ 
ಈ ಕಾಲದ "C. A.'' (Chartered Accountant) ಗಳಿದ್ದ ಹಾಗೆ. ಶಿವಶರಣ ಆದಯ್ಯನವರ ಹಾಗೆ ಬಾಚರಸರು ಕೂಡ ಸೌರಾಷ್ಟ್ರ ಸೋಮೇಶ್ವರನ ಪರಮಭಕ್ತರು. ಅಷ್ಟು ಮಾತ್ರವಲ್ಲ, ಬಾಚರಸರು ತಮ್ಮನ್ನು ತಾವು ಬಸವಣ್ಣನವರ `ಆಪ್ತ-ಪರಮಾಪ್ತ' ವಲಯದಲ್ಲಿ ಗುರುತಿಸಿಕೊಂಡಿದ್ದರು. 
``ನೇರನುಡಿ'' ಮತ್ತು ``ದಿಟ್ಟನಡೆ''ಗೆ ಬಾಚರಸರು ಹೆಸರುವಾಸಿ. ಅದು ಯಾರೇ ಇರಲಿ, ಅವರು ಇದ್ದದ್ದನ್ನು ಇದ್ದಕ್ಕಿದ್ದಂತೆ ಮುಖಕ್ಕೇನೇ ಹೇಳಿಬಿಡುತ್ತಿದ್ದರು. ಇದು ಕಾರಣವಾಗಿ, ಅದೆಷ್ಟೋ ಸಲ ಬಾಚರಸರು ಬೇರೆಯವರೊಂದಿಗೆ `ನಿಷ್ಠುರ'ವನ್ನು ಕಟ್ಟಿಕೊಂಡದ್ದು ಕೂಡ ಉಂಟು. ಮುಚ್ಚುಮರೆ, ಮುಲಾಜುಗಳಿಲ್ಲದೆ ನೇರವಾಗಿ ಮಾತನಾಡುವುದು ಬಹುತೇಕ ಶರಣರ ಹುಟ್ಟುಗುಣ. ಎಲ್ಲೋ ಅಲ್ಲಲ್ಲಿ ಬಸವಣ್ಣ, ಚೆನ್ನಬಸವಣ್ಣನವರಂಥ ಒಬ್ಬಿಬ್ಬರು ಮಾತ್ರ ಬೇರೊಬ್ಬರ ಮಜರ್ಿ, ಮುಲಾಜುಗಳನ್ನು ಹಿಡಿದುಕೊಂಡು ನಮ್ರ-ವಿನಮ್ರವಾಗಿ ಮಾತನಾಡುವುದನ್ನು ರೂಢಿಸಿಕೊಂಡಿದ್ದರು. ಅವರೊಬ್ಬಿಬ್ಬರನ್ನು ಬಿಟ್ಟರೆ ಇನ್ನುಳಿದ ಬಹುತೇಕ ಶರಣರೆಲ್ಲರೂ ಅಪ್ಪಟ ``ಫೈರ್ ಬ್ರ್ಯಾಂಡ್''!! ಅವರ ಮಾತುಗಳು ಬೆಂಕಿಚೆಂಡುಗಳಿದ್ದ ಹಾಗೆ. ಅಕ್ಷರಶಃ ಅವರ ಮಾತುಗಳು ``ಆಗ್ ಕಾ ಗೋಲಾ''ನೇ ಸರಿ!! 
ಎಲ್ಲರೂ ಸೌಮ್ಯವಾದಿಗಳಾಗಿ ಮುತ್ತಿನ ಹಾರದಂತೆ ಮಾತನಾಡಿಕೊಂಡಿದ್ದರೆ ಸಮಾಜವನ್ನು ತಿದ್ದುವುದು, ತೀಡುವುದು ಹೇಗೆ? ತಪ್ಪುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವವರನ್ನು ಸರಿದಾರಿಗೆ ತರುವವರು ಯಾರು? ಎಲ್ಲರೂ ``ನಾವು ನಿಷ್ಠುರರಾಗುವುದಿಲ್ಲ; ಇನ್ನೊಬ್ಬರ ನಿಷ್ಠುರವನ್ನು ನಾವು ಕಟ್ಟಿಕೊಳ್ಳುವುದಿಲ್ಲ'' ಎಂದರೆ ಸಮಾಜವಿದು ಸರಿಹೋಗುವುದು ಯಾವಾಗ? ಮತ್ತು ಅದು ಹೇಗೆ? ಸಮಾಜವನ್ನು ತಿದ್ದುವುದಕ್ಕೆ, ಜನಗಳ ಸರಿ-ತಪ್ಪುಗಳನ್ನು ತೀಡುವುದಕ್ಕೆ ಸೊಡ್ಡಳ ಬಾಚರಸರಂಥ ನಿಷ್ಠುರವಾದಿಗಳು ಮತ್ತು ನ್ಯಾಯವಾದಿಗಳು ಬೇಕೇ ಬೇಕು.
ಪ್ರಸ್ತುತ ವಚನದಲ್ಲಿ, ಬಾಚರಸರು ಭ್ರಮಿತ ಮಾನವ ಮನಸ್ಸನ್ನು ಎದುರಿಟ್ಟುಕೊಂಡು, ಅದನ್ನು `ಅಪರಾಧೀ' ಸ್ಥಾನದಲ್ಲಿ ನಿಲ್ಲಿಸಿಬಿಟ್ಟು ಅದಕ್ಕೆ ಪಾಠಮಾಡುತ್ತಿದ್ದಾರೆ. ನಾವೆಲ್ಲ ತಿಳಿದಿರುವ ಹಾಗೆ, ಮನಸ್ಸು ತುಂಬ ಚಂಚಲ. ತರಲೆ, ತಮಾಷೆ, ತೀಟೆ ಅದರ ಹುಟ್ಟುಗುಣ. ಅದು ಅಂದಣವನೇರಿದ ಸೊಣಗನಂತೆ ಆಡಿಕೊಂಡಿರುತ್ತದೆ. ಮನಸ್ಸು, 
ಇದು ಮನಸ್ಸು ತಾನೆ? ಯಾರ ಮನಸ್ಸಾದರೇನಂತೆ? ಹರಿಯ ಮನಸ್ಸಾದರೇನು? ಹರನ ಮನಸ್ಸಾದರೇನು? ಸಾಮಾನ್ಯವಾಗಿ ಮನಸ್ಸಿದು `ಎಡವಟ್ಟು' ದಾರಿಯಲ್ಲಿ ಹೋಗುವುದೇ ಹೆಚ್ಚು. ಅದನ್ನು ನಿಲ್ಲಿಸಿಕೊಂಡು ಆಗಾಗ್ಗೆ ಪ್ರಾಥಮಿಕ ಶಾಲಾಶಿಕ್ಷಕರ ಹಾಗೆ ಪಾಠಮಾಡುತ್ತಲೇ ಇರಬೇಕು.
ತನ್ನ ಬಳಿ ಏನೇ ಇದ್ದರೂ ಸಹ ಮತ್ತು ಏನೆಲ್ಲ ಇದ್ದರೂ ಸಹ ಇನ್ನೊಂದಕ್ಕೆ ಆಸೆಪಡುವುದು ಮನಸ್ಸಿನ `ಜನ್ಮಜಾತ' ಸ್ವಭಾವ. ತನ್ನ ಮನೆಯಲ್ಲಿ ಅಪ್ಸರೆಯಂಥ ಹೆಂಡತಿ ಇದ್ದರೂ ಅಕ್ಕಪಕ್ಕದ ಮನೆಗಳ ಹೆಣ್ಣುಮಕ್ಕಳ 
ಮೇಲೆ ಕಣ್ಣುಹಾಕಿಕೊಂಡಿರುವ ಕೆಟ್ಟ ಚಾಳಿ ಮನಸ್ಸಿಗಿದೆ. ತನ್ನ ತಟ್ಟೆಯಲ್ಲಿ ಮೃಷ್ಟಾನ್ನವಿದ್ದರೂ ಇನ್ನೊಬ್ಬರ ತಟ್ಟೆಯನ್ನು ನೋಡಿಕೊಂಡು ಜೊಲ್ಲು ಸುರಿಸಿಕೊಂಡಿರುವುದು ಅದರ ಖಾಸಾ `ಖಯಾಲಿ'!! ಮನಸ್ಸು ಅಕ್ಷರಶಃ ಕೋತಿಯೇ ಸರಿ. ಸಾಧು-ಸಜ್ಜನರು ಅದಕ್ಕೆ `ಲಗಾಮು' ಹಾಕಿಕೊಂಡು ಅದನ್ನು ತಮ್ಮ ಅಂಕಿತದಲ್ಲಿಟ್ಟುಕೊಂಡಿರುತ್ತಾರೆ. ದುರ್ಜನರು ಮಾತ್ರ ಅದಕ್ಕೆ ಕಡಿವಾಣಹಾಕದೆ ಸ್ವಾತಂತ್ರ್ಯಕೊಟ್ಟು ಅದನ್ನು ಎಲ್ಲೆಂದರಲ್ಲಿ ಸ್ವೇಚ್ಛೆಯಿಂದ ತಿರುಗಾಡಿಕೊಂಡಿರಲು- ಬಿಟ್ಟಿರುತ್ತಾರೆ. 
ಪ್ರಸ್ತುತ ವಚನದಲ್ಲಿ ಚಪಲ ಚೆನ್ನಿಗರಾಯನಂತಿರುವ ಮಾನವ ಮನಸ್ಸಿಗೆ ಬಾಚರಸರು ಬುದ್ಧಿಹೇಳುತ್ತಿದ್ದಾರೆ. ಅವರು ಮನಸ್ಸಿಗೆ ಕೇಳುತ್ತಿದ್ದಾರೆ, ``ಎಲೈ ಭ್ರಮಿತ ಮಾನವನ ಹುಚ್ಚು ಮನಸ್ಸೇ, ಗಂಗಾ ನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ?'' ಎಂದು. ಗಂಗಾನದಿಗೆ ನಮ್ಮ ಸಂಸ್ಕೃತಿಯಲ್ಲಿ ಬಹುದೊಡ್ಡ ಸ್ಥಾನವಿದೆ. ಗಂಗಾ ನದಿಯನ್ನು ನಾವೆಲ್ಲ ಪರಮಪವಿತ್ರ ಎಂದು ಭಾವಿಸುತ್ತೇವೆ. ಗಂಗೆಯನ್ನು ನಾವುಗಳು ಬರೀ `ಗಂಗೆ' ಎಂದು ಕರೆಯದೆ ಅದನ್ನು `ದೇವಗಂಗೆ' ಎಂದು ಕರೆಯುತ್ತೇವೆ. ``ಗಂಗಾ ಪಾಪಂ, ಶಶೀ ತಾಪಂ, ದೈನ್ಯಂ ಕಲ್ಪತರುಸ್ತಥಾ'' ಎಂಬ ಮಾಲಿಕೆಯ ಈ ವಿಧದ ಗೌರವಕ್ಕೆ ಗಂಗಾನದಿ ಪಾತ್ರವಾಗಿದೆ. ಇಂಥ ಪರಮ ಪರಿಶುದ್ಧ ಗಂಗಾ ನದಿಗೆ ಹೋಗಿಬಿಟ್ಟು ಅಲ್ಲಿ ಸ್ನಾನಮಾಡಿ ಬಂದಾದ ಮೇಲೆ ಯಾರಾದರೂ ಗಂಜಳದಲ್ಲಿ ಹೊರಳಾಡುತ್ತಾರೆಯೇ? ``ಗಂಜಳ'' ಅಂದರೆ ಹೊಲಸು, ಕಸ, ಶಗಣಿ ಎಂದರ್ಥ. ಗಂಗೆಯಲ್ಲಿ ಸ್ನಾನಮಾಡಿ ಗಂಜಳದ ತುಂಬ ಹೊರಳಾಡಿದರೆ ಲೌಕಿಕವು ಏನನ್ನುತ್ತದೆ? ಅಂಥ ವ್ಯಕ್ತಿಯನ್ನು ಲೌಕಿಕವು ಹುಚ್ಚ, ದಡ್ಡ, ಅವಿವೇಕಿ ಎಂದು ಕರೆಯುತ್ತದೆ. ಆಂಗ್ಲಭಾಷೆಯಲ್ಲಿ 
ಅಂಥ ವ್ಯಕ್ತಿಗೆ `ಸ್ಟುಪಿಡ್' ಎಂದು ಕರೆಯುತ್ತಾರೆ. ಅದೇ ರೀತಿ ಗಂಗೆಯಲ್ಲಿ ಮಿಂದು ಬಂದ ಮನಸ್ಸು ಗಂಜಳದಲ್ಲಿ ಹೊರಳಾಡಿದರೆ ಮತ್ತು ಉರುಳಾಡಿದರೆ ಅದು `ಸ್ಟುಪಿಡ್' ಅಲ್ಲದೆ ಮತ್ತೇನು?
ಮತ್ತೆ ಮುಂದುವರಿದು ಬಾಚರಸರು ಕೇಳುತ್ತಾರೆ, ``ಎಲೈ ಮರುಳ ಮನಸ್ಸೇ, ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ?'' ಎಂದು. ಮೈಗೆ ಹಚ್ಚಿಕೊಳ್ಳಲೆಂದು ಕಣ್ಣೆದುರಿಗೇನೇ ದೊಡ್ಡ ದೊಡ್ಡ ಹರಿವಾಣಗಳಲ್ಲಿ ಚಂದನವನ್ನು (ಗಂಧವನ್ನು) ತೇಯ್ದು ಇಟ್ಟಿದ್ದಾರೆ. ಆ ಚಂದನವನ್ನು ಮೈಗೆ ಹಚ್ಚಿಕೊಂಡರೆ ಅದು ಧರ್ಮ. ಅದನ್ನು ಬಿಟ್ಟು ದುರ್ಗಂಧವನ್ನು ಮೈಗೆ ಹಚ್ಚಿಕೊಳ್ಳುತ್ತೇನೆಂದರೆ ಏನು ಮಾಡುವುದು? ಅದು ದರಿದ್ರ `ಹಣೆಬರಹ' 
ಮತ್ತು `ಕರ್ಮ' ಅಷ್ಟೇ!! ``ಚಂದನ ಇಲ್ಲ'' ಎಂದರೆ ಆ ಮಾತು ಬೇರೆ. ಚಂದನವದು ಸಮೃದ್ಧವಾಗಿ ಇದ್ದಾಗಲೂ ಅದನ್ನು ಆಚೆಗಿಟ್ಟು ಕಸ, ಕೆಸರು, ರಾಡಿ, ಕೊಳಕು..., ಇತ್ಯಾದಿಗಳನ್ನು ಮೈಗೆ ಪೂಸಿಕೊಂಡರೆ (ಲೇಪಿಸಿಕೊಂಡರೆ) ಅದಾರೋ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ ಎನ್ನುವ ಹಾಗೆ ಜನಗಳು ತಮ್ಮ ಹುಬ್ಬುಗಳನ್ನು ಹಣೆಗೇರಿಸಿಕೊಂಡು ಆಶ್ಚರ್ಯದಿಂದ ನೋಡುತ್ತಾರೆ. ಜಗತ್ತಿನಲ್ಲಿ ಹುಟ್ಟಿಬಂದಾದ ಮೇಲೆ ಅದಷ್ಟೊಂದು ಸಾಮಾನ್ಯ ಪರಿಜ್ಞಾನ ಕೂಡ ಇಲ್ಲದೆ ಹೋದರೆ ಅದೇನು ಪ್ರಯೋಜನ?
ಬಾಚರಸರು ತಮ್ಮ ಮನಸ್ಸಿಗೆ ಕೇಳುತ್ತಾರೆ, "ಎಲೈ ಮನಸ್ಸೇ, ಸುರಭಿ ಮನೆಯಲ್ಲಿ ಕರೆವುತ್ತಿರೆ, ಹರಿವರೆ ಸೊಣಗನ ಹಾಲಿಂಗೆ?'' ಎಂದು. ``ಸುರಭಿ'' ಅಂದರೆ ಹಸು, ಆಕಳು ಎಂದರ್ಥ. "ಕರೆವುದು'' ಅಂದರೆ ``ಹಾಲುಕೊಡುವುದು'' ಎಂದರ್ಥ. ಮನೆಯಲ್ಲಿ ಕಾಮಧೇನುವಿನಂಥ ಹಸು ಇದೆ. ಅದು ಯಥೇಷ್ಟವಾಗಿ `ಅಮೃತಸದೃಶ' ಹಾಲನ್ನು ಕೊಡುತ್ತಿದೆ. ಅದು ಅಂಥ, ಇಂಥ ಸಾಮಾನ್ಯದ ಹಾಲಲ್ಲ; ಅದು ಪಂಚಾಮೃತಕ್ಕೆ ಸಲ್ಲುವ ಹಾಲು!! ಅಂಥ ಹಸುವಿನ ಹಾಲನ್ನು ಬಿಟ್ಟು ಅದೇಕೆ ಸೊಣಗನ ಹಾಲಿಗೆ ಆಸೆಪಡುವಿ? ``ಸೊಣಗ'' ಎಂದರೆ ನಾಯಿ ಎಂದರ್ಥ. ``ಸೊಣಗನ ಹಾಲು'' ಎಂದರೆ ನಾಯಿಯ ಹಾಲು, ನಾಯ್ ಮೊಲೆವಾಲು ಎಂದರ್ಥ. ಬಾಚರಸರು ಮನಸ್ಸಿಗೆ ``ನಾಯಿ ಹಾಲಿಗೆ ಅದೇಕೆ ಆಸೆಪಡುವಿ?'' ಎಂದು ಕೇಳುತ್ತಾರೆ. ಹಸುವಿನ ಹಾಲೆಲ್ಲಿ? ನಾಯಿಯ ಮೊಲೆಹಾಲೆಲ್ಲಿ? ಒಂದಕ್ಕೊಂದನ್ನು ಸರಿಮಾಳ್ಪರೇ? ``ಸಕ್ಕರೆಗುಪ್ಪಂ ಸರಿಮಾಳ್ಪರೇ?'' ಹಸುವಿನ ಹಾಲನ್ನು ಆಚೆಗೆ ತಳ್ಳಿ ನಾಯಿಹಾಲಿಗೆ ಬಾಯಿಹಾಕಿದರೆ, ಅದರಂಥ ಮರುಕಪಡುವ ಸಂಗತಿ ಇನ್ನೊಂದೆಲ್ಲಾದರೂ ಉಂಟೇ? ತಾನಾಗಿಯೇ ಒಲಿದು ಬಂದ `ಸುರಭಿಕ್ಷೀರ' ಯೋಗಕ್ಕೆ ಬೆನ್ನುಹಾಕಿ `ಶುನಕಕ್ಷೀರ'ಕ್ಕೆ ಬಾಯಿಹಾಕಿದರೆ ಅದು ಮೂರ್ಖತನದ ಪರಮಾವಧಿ ಮತ್ತು ಪರಾಕಾಷ್ಠೆಯಲ್ಲದೆ ಮತ್ತೇನು?
ಬಾಚರಸರು ಮತ್ತೆ ಮುಂದುವರಿದು ಮನಸ್ಸಿಗೆ ಕೇಳುತ್ತಾರೆ, ``ಎಲೈ ಭ್ರಮಿತ ಮಾನವ ಮನಸ್ಸೇ, ಬಯಸಿದಮೃತವಿದ್ದಂತೆ ಅಂಬಿಲವ ನೆರೆದುಂಬುವುದು ಸರಿಯೇ?'' ಎಂದು. ``ಸಾಕ್ಷಾತ್ ನೀನು ಇಷ್ಟಪಟ್ಟಂಥ ಮತ್ತು ಬಯಸಿದಂಥ ಅಮೃತವೇ ನಿನ್ನ ಕಣ್ಣೆದುರಿಗಿದೆ. ಅದನ್ನು ಸೇವಿಸುವುದನ್ನು ಬಿಟ್ಟು ಅಂಬಲಿಯನ್ನು ಸೇವಿಸುತ್ತೇನೆ, ಅಂಬಲಿಯನ್ನು ಉಣ್ಣುತ್ತೇನೆ ಎಂದರೆ ಏನು ಮಾಡುವುದು? ಅಮೃತವನ್ನು ಕೈಯಲ್ಲಿಟ್ಟುಕೊಂಡು ಅಂಬಲಿಗೆ ಅದೇಕೆ ಆಸೆಪಡುವಿ? ಅಮೃತವನ್ನು ಗಮನಬಾಹಿರವಾಗಿಸಿಬಿಟ್ಟು ಅಂಬಲಿಗೆ ಆಸೆಪಡುವುದು ಎಂದರೆ ಅದು ಅವಿವೇಕದ ಪರಮಾವಧಿಯಲ್ಲದೆ ಮತ್ತೇನು? ಈ ರೀತಿ ರಾಜ್ಯವನ್ನು ಬಿಟ್ಟು ತ್ಯಾಜ್ಯಕ್ಕೆ ಕೈಹಾಕುವವರನ್ನು ಬಾಚರಸರು ``ಭ್ರಮಿತ ಮಾನವರು'' ಎಂದು ಕರೆದಿದ್ದಾರೆ.
ಬಾಚರಸರು ಮಾನವ ಸಹಜವಾದ ತಮ್ಮ ಭ್ರಮಿತ ಮನಸ್ಸಿಗೆ ಹೇಳುತ್ತಿದ್ದಾರೆ, ``ಪರಮಪದವಿಯನೀವ ಚೆನ್ನ ಸೊಡ್ಡಳನಿದ್ದಂತೆ, ಸಾವದೇವರ ನೋಂತರೆ, ಕಾವುದೆ ನಿನ್ನ?'' ಎಂದು. ``ಪರಮ ಪದವಿಯನ್ನು ನಿನಗೆ `ಧಾರೆ' ಎರೆದು ಕೊಡುವ ಸೊಡ್ಡಳ ನಿನ್ನ ಬಳಿಯಲ್ಲಿಯೇ ಇದ್ದಾನೆ. ಆತ ನಿನಗೆ ಪರಮ ಪದವಿಯನ್ನು ಕೊಡಲು ಸಿದ್ಧನಾಗಿದ್ದಾನೆ. ಇಂಥ ಸಂದರ್ಭ, ಸನ್ನಿವೇಶದಲ್ಲಿ ಬೇರೆ ಆ ದೇವರು, ಈ ದೇವರು, ಸಾವದೇವರು ಮತ್ತು ಸಾವಿರದೇವರುಗಳ ಬಳಿಗೆ ಅದೇಕೆ ಹೋಗುವಿ? ನಿನ್ನನ್ನು ``ಕಾಯುವಾತ'' ಮತ್ತು ``ಕಾಪಾಡುವಾತ'' ಸೊಡ್ಡಳ ಮಾತ್ರ!! ಅವನನ್ನು ಭಜಿಸಿಕೊಂಡಿರು, ಪೂಜಿಸಿಕೊಂಡಿರು ಮತ್ತು ಜಪಿಸಿಕೊಂಡಿರು. ಬೇರೆ ನೂರಾರು, ಸಾವಿರಾರು `ಸಾವ' ಮತ್ತು `ಕೆಡುವ' ದೇವರುಗಳ ಕುರಿತು ಜಪ, ತಪ, ವ್ರತ, ಉಪವಾಸ... ಮಾಡಿಕೊಂಡಿದ್ದರೆ ಅದೇನು ಪ್ರಯೋಜನ? ಅವು ನಿನ್ನನ್ನು ಕಾಯುವವೇ? ಅವು ನಿನ್ನನ್ನು ಕಾಪಾಡುವುದು ಎಲ್ಲಾದರೂ ಉಂಟೇ? ``ಕಾವುದು'' ಎಂದರೆ ``ಕಾಯುವುದು'', ``ಕಾಪಾಡುವುದು'', ``ರಕ್ಷಿಸುವುದು'' ಎಂದರ್ಥ. 
``ನಿನಗೆ ಬ್ರಹ್ಮಪದವಿ, ವಿಷ್ಣುಪದವಿ, ರುದ್ರಪದವಿಗಳಿಗಿಂತಲೂ ಮಿಗಿಲಾದ ಪರಮಪದವಿಯನ್ನು ನೀಡಲು ಸಾಕ್ಷಾತ್ ನಿನ್ನ ಇಷ್ಟದೈವ ``ಚೆನ್ನ ಸೊಡ್ಡಳ'' ಕಾದುಕೊಂಡಿದ್ದಾನೆ. ಅವನತ್ತ ಗಮನಹರಿಸು. ಅಷ್ಟು ಮಾತ್ರ ಸಾಕು!!
ಇನ್ನು ಬೇರೆ ಯಾವ ದೇವರೂ ಬೇಡ'' ಎಂದು ಬಾಚರಸರು ತಮ್ಮ ಮನಸ್ಸಿಗೆ ತಿಳಿಹೇಳುವುದನ್ನು ನಾವೆಲ್ಲ ಕೇಳಿಸಿಕೊಂಡಿದ್ದೇವೆ. ಅದೇ ರೀತಿ ನಾವುಗಳು ಕೂಡ ನಮ್ಮ ಇಷ್ಟದೈವ, ಆರಾಧ್ಯದೈವಗಳನ್ನು ಹೊರತುಪಡಿಸಿ 
ಬೇರೆ ಆ ದೈವ, ಈ ದೈವ ಎಂದು ನೂರು ದೈವ, ನೂರಾರು ದೈವ, ದೇವರುಗಳ ಹಿಂದೆ ಅಲೆಯುವುದು ಬೇಡ ಮತ್ತು ಆ ದೇವರುಗಳನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಹೋಗುವುದು ಬೇಡ. ಹಾಗೇನಾದರೂ ನಾವು ಮಾಡಿದ್ದೇ ಆದರೆ ಕಂಕುಳಲ್ಲಿ ಕೂಸಿಟ್ಟುಕೊಂಡು ಊರೆಲ್ಲ ಹುಡುಕಿದ ಆ ತಾಯಿಯಂತೆ ನಮ್ಮ ಸ್ಥಿತಿ ನಗೆಪಾಟಲಾಗುತ್ತದೆ 
ಮತ್ತು ಹಾಸ್ಯ-ಅಪಹಾಸ್ಯಗಳಿಗೆ ವಸ್ತು-ವೇದಿಕೆಯಾಗುತ್ತದೆ. ಆದ್ದರಿಂದ ಅಂಥ ಗಂಭೀರ-ಘನಗಂಭೀರ ಸಂದರ್ಭ-ಸನ್ನಿವೇಶಗಳಿಗೆ ನಾವು-ನೀವುಗಳು ಆಹಾರವಾಗುವುದು ಬೇಡ ಎಂಬುವುದು ಈ ವಚನದ ತಾತ್ಪರ್ಯ ಮತ್ತು 
ಈ ವಚನಾಂತರಂಗದ ಆಶಯ.   

ಡಾ|| ಶ್ರೀ ಶಿವಾನಂದ ಶಿವಾಚಾರ್ಯರು 

ಹಿರೇಮಠ, ತುಮಕೂರು